ಬೆಂಗಳೂರು: ಗುತ್ತಿಗೆ ನವೀಕರಣಕ್ಕೆ ಇರುವ ಕಾನೂನು ತೊಡಕು ಸರಿಪಡಿಸಬೇಕು ಎಂದು ಒತ್ತಾಯಿಸಿ ಕಲ್ಲು ಕ್ವಾರಿ ಹಾಗೂ ಕ್ರಷರ್ ಮಾಲೀಕರು ಸ್ವಾತಂತ್ರ್ಯ ಉದ್ಯಾನದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಕರ್ನಾಟಕ ಕ್ವಾರಿ ಹಾಗೂ ಕಲ್ಲು ಕ್ರಷರ್ ಮಾಲೀಕರ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಧರಣಿ ನಡೆಯಿತು.
ಕ್ವಾರಿ ಗುತ್ತಿಗೆ ನವೀಕರಣ, ಪರಿಗಣಿತ ಭೂ ಪರಿವರ್ತನೆ ಹಾಗೂ ರಾಜಧನ ಪಾವತಿಯಲ್ಲಿ ವಿಚಾರದಲ್ಲಿ ರಾಜ್ಯ ಸರ್ಕಾರ ದ್ವಂದ್ವ ನಿಲುವನ್ನು ಅನುಸರಿಸುತ್ತಿದೆ. ಅಧಿಕಾರಿಗಳು ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಮಾಲೀಕರು ಆರೋಪಿಸಿದರು.
ವಿಧಾನ ಪರಿಷತ್ನ ವಿರೋಧ ಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ‘ಕಳೆದ ಭಾರಿ ಪ್ರತಿಭಟನೆ ಮಾಡುತ್ತಿದ್ದ ನಿಮ್ಮನ್ನು ನಂಬಿಸಿದ ಸಚಿವರು ಬೇಡಿಕೆ ಈಡೇರಿಸದೆ ವಂಚಿಸಿದ್ದಾರೆ. ಕೊಟ್ಟ ಭರವಸೆ ಈಡೇರಿಸಲು ಆಗದ ಮೇಲೆ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು’ ಎಂದು ವಿನಯ್ ಕುಲಕರ್ಣಿ ವಿರುದ್ಧ ಹರಿಹಾಯ್ದರು.