ಕಲಬುರಗಿ: ವಿದ್ಯಾರ್ಥಿಗಳು ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶರಣಬಸವ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ.ಲಿಂಗರಾಜ ಶಾಸ್ತ್ರಿ ಹೇಳಿದರು.
ಶರಣಬಸವ ವಿವಿಯ ಶತಮಾನೋತ್ಸವ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಇಂಡಕ್ಷನ್ (ದೀಕ್ಷಾರಂಭ) ಕಾರ್ಯಕ್ರಮದಲ್ಲಿ ಸಮಯದ ಮಹತ್ವ ಕುರಿತು ಅವರು ಉಪನ್ಯಾಸ ನೀಡಿದರು.
ಸಮಯ ಪಾಲನೆ ಮಾಡದಿದ್ದರೆ ಭವಿಷ್ಯ ಹಾಳಾಗುತ್ತದೆ. ಸಮಯ ವ್ಯರ್ಥ ಮಾಡದೆ ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದರೆ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದು ಹೇಳಿದರು.
ವಿದ್ಯಾರ್ಥಿಗಳಲ್ಲಿ ದೃಢ ನಿರ್ಧಾರ, ಆತ್ಮವಿಶ್ವಾಸ, ಸತತ ಪ್ರಯತ್ನ ಮಾಡುವ ಗುಣ ಇರಬೇಕು. ಇಂದಿನ ವಿದ್ಯಾರ್ಥಿಗಳು ಕೇವಲ ದೊಡ್ಡ ಕನಸು ಕಾಣುತ್ತಾರೆ. ಅದನ್ನು ನನಸಾಗಿಸಿಕೊಳ್ಳಲು ಶ್ರಮ ಪಡುವುದಿಲ್ಲ ಎಂದರು.
ಡಾ.ಶಿವರಾಜ ಶಾಸ್ತ್ರಿ ಮಾತನಾಡಿ, ವಿದ್ಯಾರ್ಥಿಗಳು ಗುರುಹಿರಿಯರು, ಪೋಷಕರನ್ನು ಗೌರವಿಸುವುದನ್ನು ಕಲಿಯಬೇಕು. ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಮುಕ್ತಾಂಬಿಕ ಕಾಲೇಜಿನ ಪ್ರಾಚಾರ್ಯ ಎಂ.ಆರ್ ಹುಗ್ಗಿ ಮಾತನಾಡಿ, ಮಕ್ಕಳು ಓದಿನ ಜತೆಗೆ ಕ್ರೀಡೆಯಲ್ಲಿ ಭಾಗವಹಿಸಬೇಕು. ಆಗ ದೈಹಿಕವಾಗಿ ಸದೃಢರಾಗುತ್ತಾರೆ ಎಂದರು.