ಕಲಬುರಗಿ: ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯು ಪರಿಷ್ಕರಿಸಿದ ಪಠ್ಯಪುಸ್ತಕಗಳಲ್ಲಿ ಶಿಕ್ಷಣದ ಕೇಸರೀಕರಣದ ಹುನ್ನಾರ ಅಡಗಿರುವುದರಿಂದ ಯಾವುದೇ ಕಾರಣಕ್ಕೂ ಅವುಗಳನ್ನು ಮಕ್ಕಳಿಗೆ ವಿತರಿಸಬಾರದು. ತಕ್ಷಣ ವಾಪಸ್ ಪಡೆದು ಹಳೆಯ ಪಠ್ಯಪುಸ್ತಕಗಳನ್ನು ನೀಡಬೇಕು ಎಂದು ಒತ್ತಾಯಿಸಿ ಜಾತ್ಯತೀತ ಜನತಾದಳದ ಯುವ ಘಟಕದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಸಮಾಜ ಸುಧಾರಕರು, ಸ್ವಾತಂತ್ರ್ಯ ಹೋರಾಟಗಾರರಾದ ಬಸವಣ್ಣನವರು, ಭಗತ್ ಸಿಂಗ್, ಟಿಪ್ಪು ಸುಲ್ತಾನ್, ಪೆರಿಯಾರ್, ಬ್ರಹ್ಮಶ್ರೀ ನಾರಾಯಣಗುರುಗಳ ಪಠ್ಯಗಳಲ್ಲಿ ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ ಹಾಗೂ ಪ್ರಮುಖ ಮಾಹಿತಿಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ. ಆರ್ಎಸ್ಎಸ್ ಸರಸಂಘಚಾಲಕರಾಗಿದ್ದ ಕೇಶವ ಹೆಡಗೇವಾರ್ ಅವರು ಬರೆದ ಭಾಷಣವನ್ನು ಸೇರಿಸುವ ಮೂಲಕ ಶಿಕ್ಷಣದ ಕೇಸರೀಕರಣ ಮಾಡಲಾಗಿದೆ ಎಂದು ಟೀಕಿಸಿದರು.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ಅಲೀಂ ಇನಾಮದಾರ, ಜೆಡಿಎಸ್ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಶಾಮರಾವ್ ಸೂರನ್, ಬಾಬರ್ ಮುಸ್ತಾಫ, ಅಫ್ಜಲ್ ಮೆಹಮೂದ್, ಸಾಜಿದ್ ಕಲ್ಯಾಣಿ, ಶಿರಾಜ್ ಶಾಬದ್ದಿ, ಅಸಗರ್ ಹುಸೇನ್, ನಾಗರಾಜ, ಶಿವಕುಮಾರ ಸ್ವಾಮಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.