ಕಲಬುರ್ಗಿ: ಹುಮನಾಬಾದ್ ಕ್ರಾಸ್ನಿಂದ ರಾಮಮಂದಿರಕ್ಕೆ ಹೋಗುವ ರಿಂಗ್ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಕೂಡಲೇ ದುರಸ್ತಿ ಮಾಡಬೇಕು ಎಂದು ಒತ್ತಾಯಿಸಿ ಜಾತ್ಯತೀತ ಜನತಾದಳ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಈ ರಸ್ತೆಯಲ್ಲಿ ಸಾಕಷ್ಟು ತಗ್ಗುಗಳು ನಿರ್ಮಾಣವಾಗಿದ್ದು, ಅವುಗಳನ್ನು ಮುಚ್ಚಲು ಕ್ರಮ ಕೈಗೊಳ್ಳಬೇಕು. ನಗರದಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿರುವುದರಿಂದ ಇನ್ನೊಂದು ರಿಂಗ್ ರಸ್ತೆಯನ್ನು ನಿರ್ಮಿಸಬೇಕು. ನಗರದೊಳಗೆ ಲಾರಿಗಳ ಓಡಾಟಕ್ಕೆ ಕಡಿವಾಣ ಹಾಕಬೇಕು. ಸೆ 9ರಂದು ಇದೇ ರಸ್ತೆಯಲ್ಲಿ ಅಪಘಾತ ಸಂಭವಿಸಿ ವ್ಯಕ್ತಿಯೊಬ್ಬರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ರಸ್ತೆ ದುರಸ್ತಿ ಮಾಡದಿದ್ದರೆ ಮಾಲಗತ್ತಿ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ಮಾಡುವುದು ಅನಿವಾರ್ಯ ಎಂದು ಪಕ್ಷದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮೊಹಮ್ಮದ್ ಅಲೀಂ ಇನಾಮದಾರ ಎಚ್ಚರಿಸಿದರು.
ಮುಖಂಡರಾದ ಉಸ್ಮಾನ್ ಅಲಿ ಗುತ್ತೇದಾರ, ಶಿವಾಜಿ, ಮನೋಹರ ಈ. ಪೋದ್ದಾರ, ಆನಂದ ಲಿಂಗನವಾಡಿ, ಅರವಿಂದ ರಂಜೇರಿ, ಅಲಂದಾನ ಸೈದಿ, ಅಬ್ಬು ಬೇಕರ್, ಶಹಾ ಪಟೇಲ್, ಸೈಯದ್ ನದೀಂ, ಸಯ್ಯದ್ ಸುಲೇಮಾನ್, ಶಂಗೀರ್ ಖಾನ್ ಇದ್ದರು.