ಕಲಬುರಗಿ: ಕಾಂಗ್ರೆಸ್ ಪಕ್ಷದ ಶಾಸಕರು ಬಜೆಟ್ ಅಧಿವೇಶನದ ಪಾವಿತ್ರ್ಯ ಹಾಳು ಮಾಡಿದ್ದಾರೆ ಎಂದು ಶಾಸಕ ಕೆ.ಎಸ್ ಈಶ್ವರಪ್ಪ ಟೀಕಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಜೆಟ್ ಅಧಿವೇಶನದಲ್ಲಿ ಈ ಸಲ ಹೂವು ಇಟ್ಟುಕೊಂಡು ಬಂದು ಸದನ ಗೌರವ ಹಾಳು ಮಾಡಿದ್ದಾರೆ. ಮುಂದಿನ ದಿನದಲ್ಲಿ ಏನೇನು ಇಟ್ಟುಕೊಂಡು ಬರ್ತಾರೊ ಗೊತ್ತಿಲ್ಲ’ ಎಂದರು.
‘ಸಿದ್ದರಾಮಯ್ಯ ಹಾಗೂ ಇತರ ಕಾಂಗ್ರೆಸ್ ಶಾಸಕರು ಚಂಡು ಹೂ ಇಟ್ಟುಕೊಂಡು ಬರುವ ಮೂಲಕ ಪ್ರಚಾರ ಗಿಟ್ಟಿಸಲು ಹೋದರು. ಆದರೆ, ರಾಜ್ಯಕ್ಕೆ, ತಮ್ಮ ಪಕ್ಷಕ್ಕೆ ಅವಮಾನ ಮಾಡಿದ್ದಾರೆ’ ಎಂದು ಟೀಕಿಸಿದರು.
’ವಿಧಾನಸಭೆ ಪ್ರಜಾಪ್ರಭುತ್ವದ ದೇವಾಲಯ. ಘನತೆ ಉಳಿಸಬೇಕು. ಕಾಂಗ್ರೆಸ್ ನಾಯಕರು ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು.
‘ಕಾಂಗ್ರೆಸ್ ರಾಷ್ಟ್ರೀಯ ನಾಯಕರ ಮುಖ ನೋಡಿ ಜನರು ಮತ ಹಾಕುವುದಿಲ್ಲ. ಆದರೆ, ನಮ್ಮ ರಾಷ್ಟ್ರೀಯ ನಾಯಕರು ಮುಖ ನೋಡಿದರೆ ಮತ ಬರುತ್ತವೆ’ ಎಂದು ಹೇಳಿದರು.
‘ಸಿದ್ದರಾಮಯ್ಯ ಅನೇಕ ಹಿಂದುಳಿದವರಿಗೆ ಟಿಕೆಟ್ ಕೊಟ್ಟು ಸೋಲಿಸಿದರು. ಪರಮೇಶ್ವರ ಅವರನ್ನು ಸಿದ್ದರಾಮಯ್ಯ ಸೋಲಿಸಿಲ್ಲ ಅಂತ ಚಾಮುಂಡೇಶ್ವರಿ ಮೇಲೆ ಪ್ರಮಾಣ ಮಾಡಿ ಹೇಳಲಿ’ ಎಂದು ಸವಾಲು ಹಾಕಿದರು.