ಸೇಡಂ: ತಾಲ್ಲೂಕಿನ ಕಾಗಿಣಾ ನದಿಯಲ್ಲಿ ಜು.16ರಂದು ಕೊಚ್ಚಿಕೊಂಡು ಹೋದ ಸಂಗಾವಿ (ಎಂ) ಗ್ರಾಮದ ಮಾಣಿಕಮ್ಮ ಮೂರನೇ ದಿನವೂ ಪತ್ತೆಯಾಗಲಿಲ್ಲ.
ಮಾಣಿಕಮ್ಮ ಅವರಿಗಾಗಿ ಭಾನುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಮೀನುಗಾರರು ಮತ್ತು ರಕ್ಷಣಾ ಪಡೆಯ ಸಿಬ್ಬಂದಿ ನಿರಂತರ ಶೋಧನಾ ಕಾರ್ಯ ನಡೆಸಿದರು.
ಬುಧವಾರ ಚಿತ್ತಾಪೂರ ತಾಲ್ಲೂಕಿನ ದಂಡೋತಿ, ಮುಡಬೂಳ ಮತ್ತು ಬಾಗೋಡಿ ಗ್ರಾಮಕ್ಕೆ ಹೊಂದಿಕೊಂಡ ಕಾಗಿಣಾ ನದಿ ದಡದಲ್ಲಿ ಶೋಧನೆ ನಡೆಸಲಾಗಿತ್ತು. ಮಧ್ಯಾಹ್ನ ಸುರಿದ ಭಾರಿ ಮಳೆಯಿಂದಾಗಿ ಶೋಧನಾ ಕಾರ್ಯ ಸ್ಥಗಿತಗೊಂಡಿತ್ತು. ಭಾನುವಾರದ ಕಾರ್ಯಕ್ಕೂ ಮಳೆ ಅಡ್ಡಿಯಾಗಿದೆ. ಮೂರನೇ ದಿನವಾದರೂ ಮಾಣಿಕಮ್ಮ ಪತ್ತೆಯಾಗಿಲಿಲ್ಲ. ಇದರಿಂದ ಕುಟುಂಬ ಸದಸ್ಯರು ದುಃಖದಲ್ಲಿ ಮುಳುಗಿದರು.
ಉಪವಿಭಾಗಾಧಿಕಾರಿ ಭೇಟಿ:ಘಟನಾ ಸ್ಥಳಕ್ಕೆ ಉಪವಿಭಾಗಾಧಿಕಾರಿ ಬಿ.ವಿ.ಅಶ್ವಿಜಾ ಅವರು ಭಾನುವಾರ ಭೇಟಿ ನೀಡಿ ಮಾಹಿತಿ ಪಡೆದು, ಶೋಧನಾ ಕಾರ್ಯ ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಕುಟುಂಬದ ಪರಿಸ್ಥಿತಿಯ ಕುರಿತು ಅವಲೋಕಿಸಿದರು. ಕಂದಾಯ ಅಧಿಕಾರಿಗಳ ಜತೆಗೂ ಚರ್ಚಿಸಿದರು. ’ಮಾಣಿಕಮ್ಮ ಪತ್ತೆಯಾಗುವವರೆಗೂ ಶೋಧಕಾರ್ಯ ಮುಂದುವರಿಸಬೇಕು’ ಎಂದು ಪೊಲೀಸರಿಗೆ ತಾಕೀತು ಮಾಡಿದರು ಎನ್ನಲಾಗಿದೆ.
ಕಂದಾಯ ನಿರೀಕ್ಷಕ ಅಮರೇಶ, ಪಿಎಸ್ಐ ಪೃಥ್ವಿರಾಜ ತಿವಾರಿ, ಗ್ರಾಮಸ್ಥರಾದ ಚನ್ನಬಸ್ಸಪ್ಪ ಹಾಗರಗಿ, ರಾಜು ಕಟ್ಟಿ ಸೇರಿದಂತೆ ಇದ್ದರು.