ಸೇಡಂ: ತಾಲ್ಲೂಕಿನ ಮಳಖೇಡ ಸೇತುವೆ ಮೇಲೆ ಕಾಗಿಣಾ ನದಿ ನೀರು ಹರಿದಿದ್ದರಿಂದ ಗುರುವಾರ ಮಧ್ಯಾಹ್ನದಿಂದ ಸೇಡಂ-ಕಲಬುರಗಿ ರಾಜ್ಯಹೆದ್ದಾರಿ-10 ಸಂಪರ್ಕ ಸ್ಥಗಿತಗೊಂಡಿದೆ.
ಕಾಗಿಣಾ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಿದ್ದರಿಂದ ಬಿಬ್ಬಳ್ಳಿ ಸೇತುವೆ ಕಾಗಿಣಾ ನದಿಯಲ್ಲಿ ಮುಳುಗಡೆಯಾಗಿದೆ. ಇದರಿಂದ ಬಿಬ್ಬಳ್ಳಿ ಕಾಚೂರು ಮಧ್ಯ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ಜೊತೆಗೆ ಸಂಗಾವಿ(ಎಂ) ಗ್ರಾಮದ ಸೇತುವೆ ಮುಳುಗಿದ್ದು, ಮಳಖೇಡ ಸಂಗಾವಿ (ಎಂ) ಗ್ರಾಮದ ಮಧ್ಯೆ ಸಂಪರ್ಕ ಬಂದ್ ಆಗಿದೆ.
ನದಿ ದಂಡೆಯ ಹೊಲಗಳಿಗೆ ನೀರು ನುಗ್ಗಿದೆ. ಜೊತೆಗೆ ತಾಲ್ಲೂಕಿನ ಮಳಖೇಡ ಉತ್ತರಾಧಿ ಮಠಕ್ಕೆ ಕಾಗಿಣಾ ನದಿ ನೀರು ಒಳಗಡೆ ನುಗ್ಗಿದ್ದು ಜಯತೀರ್ಥರ ವೃಂದಾವನಕ್ಕೆ ನೀರು ತಾಕಿದೆ. ಕಲಬುರಗಿಯಿಂದ ವಾಹನಗಳು ಶಹಬಾದ್, ಚಿತ್ತಾಪುರ ಮಾರ್ಗದಿಂದ ಸೇಡಂಗೆ ಬಂದವು. ಕಲಬುರಗಿಯಿಂದ ಸಮಖೇಡ ತಾಂಡಾದವರೆಗೆ ಪ್ರಯಾಣಿಕರು ಆಗಮಿಸಿ ನಂತರ ನಿರ್ಮಾಣ ಹಂತದ ಸೇತುವೆ ಮೇಲಿಂದ ಮಳಖೇಡ ಗ್ರಾಮದತ್ತ ಇಳಿದರು. ಕಬ್ಬಿಣ ಮತ್ತು ಹಗ್ಗದ ಮೇಲಿಂದ ಪ್ರಯಾಣಿಕರು ಇಳಿಯಲು ಹರಸಾಹಸಪಟ್ಟರು. ಪೊಲೀಸರು ಇಳಿಯದಂತೆ ಎಚ್ಚರಿಕೆ ನೀಡಿದರು.
ನದಿಯತ್ತ ತೆರಳದಂತೆ ಮಳಖೇಡ ಠಾಣೆಯ ಎಎಸ್ಐ ಶಿವಶರಣಪ್ಪ ಮಳಖೇಡಕರ್, ಸೈಯದ್ ಮುಜಾಫರ್ ಅಲಿ, ಪೊಲೀಸ್ ಸಿಬ್ಬಂದಿಗಳಾದ ಕೇದಾರ ಮತ್ತು ಚೆನ್ನಬಸವ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.