ಕಲಬುರ್ಗಿ: ಜಿಲ್ಲೆಯ ಶಹಾಬಾದ್ ತಾಲ್ಲೂಕಿನ ಮರತೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ–58) ಕೋವಿಡ್ ಸೋಂಕಿನಿಂದಾಗಿ ಶನಿವಾರ ಬೆಳಿಗ್ಗೆ ಮೃತಪಟ್ಟರು.
ಜುಲೈ 17ರಂದು ಅವರಿಗೆ ಪಾಸಿಟಿವ್ ದೃಢಪಟ್ಟ ಕಾರಣ ಇಲ್ಲಿನ ಜಿಮ್ಸ್ನ ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಲ್ಲಿ ಸೋಂಕಿನ ತೀವ್ರ ಲಕ್ಷಣಗಳು ಕಾಣಿಸಿಕೊಂಡಿದ್ದವು. ಕೆಲ ವರ್ಷಗಳ ಹಿಂದೆ ಹೃದ್ರೋಗ ಚಿಕಿತ್ಸೆಗೂ ಒಳಪಟ್ಟಿದ್ದರು ಎಂದು ಪಂಚಾಯಿತಿ ಮೂಲಗಳು ಮಾಹಿತಿ ನೀಡಿವೆ.
ಕಳೆದ 7 ವರ್ಷಗಳಿಂದ ಮರತೂರು ಪಿಡಿಒ ಆಗಿದ್ದ ಅವರಿಗೆ ಹೊನಗುಂಟ ಪಂಚಾಯಿತಿಯ ಉಸ್ತುವಾರಿಯೂ ಇತ್ತು. ಮಹಾರಾಷ್ಟ್ರದಿಂದ ಮರಳಿದ ವಲಸಿಗರಿಗಾಗಿ ತೆರೆದ ಕ್ವಾರಂಟೈನ್ ಕೇಂದ್ರದ ಉಸ್ತುವಾರಿಯನ್ನೂ ಅವರು ನಿಭಾಯಿಸಿದ್ದರು. ಎರಡು ವಾರಗಳ ಹಿಂದೆ ಹೊರರಾಜ್ಯಗಳಿಂದ ಬಂದ ವಲಸಿಗರನ್ನು ಊರಿಗೆ ಸೇರಿಸಲು ಜನ ತಕರಾರು ಮಾಡಿದ್ದರು. ಕಾರಣ, ಅವರಿಗಾಗಿಯೇ ಗ್ರಾಮದ ಶಾಲೆಯಲ್ಲಿ ತಾತ್ಕಾಲಿಕ ಕ್ವಾರಂಟೈನ್ ಕೇಂದ್ರವನ್ನೂ ಪಿಡಿಒ ತೆರೆದಿದ್ದರು.
ಉದ್ಯೋಗ ಖಾತ್ರೆ ಯೋಜನೆಯ ಕೆಲಸಗಳು ಆರಂಭವಾದ ಮೇಲೆ ಪ್ರತಿ ದಿನ ಜನರೊಂದಿಗೆ ಹೆಚ್ಚು ಸಂಪರ್ಕಕ್ಕೆ ಬಂದಿದ್ದರು ಎಂದೂ ತಿಳಿಸಲಾಗಿದೆ.
ಹೊನಗುಂಟ ಪಂಚಾಯಿತಿಯಲ್ಲಿ 9 ಹಾಗೂ ಮರತೂರಿನಲ್ಲಿ 11 ಸಿಬ್ಬಂದಿ ಇವರೊಂದಿಗೆ ಬೆರೆತು ಕೆಲಸ ಮಾಡಿದ್ದಾರೆ. ಆದರೆ, ಯಾರಲ್ಲೂ ಇದೂವರೆಗೆ ಲಕ್ಷಣಗಳು ಕಂಡುಬಂದಿಲ್ಲ ಎಂದು ಇಲ್ಲಿನ ಸಿಬ್ಬಂದಿ, ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಸಹ ಕಾರ್ಯದರ್ಶಿ ಶಿವಾನಂದ ತಿಳಿಸಿದ್ದಾರೆ.
ಕಲಬುರ್ಗಿ ತಾಲ್ಲೂಕಿನ ಹತಗುಂದಾ ಮೂಲದವರಾದ ಅವರಿಗೆ ಇಬ್ಬರು ಪುತ್ರರು, ಪತ್ನಿ ಇದ್ದಾರೆ.