ಬಿಸಿಲು ಕಾಡಿದಾಗ ಮನುಷ್ಯರು ನೆರಳನ್ನು ಹುಡುಕುತ್ತಾರೆ; ಆದರೆ ಮಾತಿಲ್ಲದ ಜೀವಿಗಳಾದ ಪೊಲೀಸ್ ನಾಯಿಗಳು? ಅಪರಾಧ ಪತ್ತೆಯಂತಹ ಕಠಿಣ ಕೆಲಸದಲ್ಲಿ ದಿನವೂ ಮೈಮರೆತು ಕೆಲಸ ಮಾಡುವ ಈ ಶಿಸ್ತಿನ ಸಿಪಾಯಿಗಳಿಗೆ ಬೇಸಿಗೆ ಇನ್ನಷ್ಟು ಸವಾಲು. ಸೂರ್ಯನ ತಾಪ ದಿನೇ ದಿನೇ ಏರಿಕೆಯಾಗುತ್ತಿದ್ದಂತೆ, ಅವುಗಳ ಮೇಲೆ ಬೀಳುವ ಒತ್ತಡವೂ ಹೆಚ್ಚುತ್ತದೆ. ಇದೇ ಸವಾಲನ್ನು ಮನಗಂಡು ಕಲಬುರಗಿ, ಬಳ್ಳಾರಿ, ಕೊಪ್ಪಳ, ಬೀದರ್, ಯಾದಗಿರಿ, ಬಾಗಲಕೋಟೆ ಹಾಗೂ ವಿಜಯನಗರ ಜಿಲ್ಲೆಯ ಹೊಸಪೇಟೆ ಪೊಲೀಸರು ತಮ್ಮ ನಾಯಿಗಳಿಗೆ ‘ತಂಪಿನ ಆರೈಕೆ’ ಎಂಬ ವಿಶಿಷ್ಟ ವ್ಯವಸ್ಥೆಯನ್ನು ರೂಪಿಸಿದ್ದಾರೆ. ಇದು ಕೇವಲ ಆರೈಕೆ ಮಾತ್ರವಲ್ಲ, ಕಾರ್ಯಕ್ಷಮತೆಯನ್ನು ಉಳಿಸಿಕೊಳ್ಳುವ ಜಾಣ್ಮೆಯ ಕ್ರಮವೂ ಆಗಿದೆ.