ಕಲಬುರ್ಗಿ: ಹಿರಿಯ ಸಾಹಿತಿ, ಕನ್ನಡ ಪ್ರಾಧ್ಯಾಪಕ ಹಾಗೂ ನಗರದ ವಿ.ಜಿ. ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯರಾಗಿದ್ದ ಈಶ್ವರಯ್ಯ ಮಠ (57) ಅವರು ಬುಧವಾರ ನಗರದ ಬಸವೇಶ್ವರ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ಕಾವ್ಯ, ಸಂಪಾದನೆ, ಸಂಶೋಧನೆ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಅವರು ಅಮೂಲ್ಯ ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿದ್ದಾರೆ.
ಸಾಹಿತ್ಯ, ಶರಣ ಸಾಹಿತ್ಯದ ಹಲವಾರು ಸಂಘಟನಾತ್ಮಕ, ರಚನಾತ್ಮಕ ಚಟುವಟಿಕೆಗಳಲ್ಲಿ ತುಂಬಾ ಕ್ರಿಯಾಶೀಲತೆಯಿಂದ ತೊಡಗಿಸಿಕೊಂಡಿದ್ದರು. ನೇರ ನಡೆ ನುಡಿಯ, ಸೂಕ್ಷ್ಮ ಸಂವೇದನೆಯ ಮುಕ್ತಮನಸ್ಸಿನ ಸಾಹಿತಿ, ಚಿಂತಕ, ಪ್ರಾಧ್ಯಾಪಕರಾಗಿದ್ದ ಡಾ. ಈಶ್ವರಯ್ಯ ಮಠ ಅವರು ಉತ್ತಮ ವಾಗ್ಮಿ.
ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.
ಅವರ ಸ್ವಗ್ರಾಮ ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ದೇವರ ಗೋನಾಳದಲ್ಲಿ ಅಂತ್ಯಕ್ರಿಯೆ ನಡೆಯಿತು.