ಚಿಂಚೋಳಿ: ತಾಲ್ಲೂಕಿನ ಸುಲೇಪೇಟನಲ್ಲಿ ವೀರಭದ್ರೇಶ್ವರ ಜಾತ್ರೆಯ ಸಡಗರ ಮನೆ ಮಾಡಿದೆ.
ಯುಗಾದಿ ಹಬ್ಬದಿಂದ ಆರಂಭವಾಗುವ ಜಾತ್ರೆ ಒಂದು ತಿಂಗಳು ನಿರಂತರವಾಗಿ ನಡೆಯುತ್ತದೆ. ಪ್ರತಿನಿತ್ಯ ಪಲ್ಲಕ್ಕಿ ಉತ್ಸವ ನಡೆಯಲಿದ್ದು 21 ದಿನಗಳ ಕಾಲ ರಾತ್ರಿ ಮತ್ತು 9 ದಿನ ಬೆಳಿಗ್ಗೆ ಜೋಡು ಪಲ್ಲಕ್ಕಿ ಮೆರವಣಿಗೆ ಜತೆಗೆ ಉಚ್ಚಾಯಿ ಮೆರವಣಿಗೆ 29ವರೆಗೆ ನಡೆಯಲಿದೆ ಎಂದು ಜಾತ್ರಾ ಕಮಿಟಿಯ ಅಧ್ಯಕ್ಷ ಬಸವರಾಜ ದೇಸಾಯಿ, ಮಹೇಶ ಬೇಮಳಗಿ ತಿಳಿಸಿದ್ದಾರೆ.
28ರಂದು ರಾತ್ರಿ ಮಹಿಳೆಯರಿಂದ ಅಗ್ನಿಕುಂಡಕ್ಕೆ ಪೂಜೆ, ಆರತಿ ಸೇವೆ ನಡೆಯಲಿದೆ. 29ರಂದು ಬೆಳಿಗ್ಗೆ ಪ್ರಭಾವಳಿ ಉತ್ಸವ, ಅಗ್ನಿ ಪ್ರವೇಶ ನಡೆಯಲಿದೆ. ಸಂಜೆ 6 ಗಂಟೆಗೆ ರಥೋತ್ಸವ ರಾತ್ರಿ 9ಕ್ಕೆ ಪಂಜಿನ ಮೆರವಣಿಗೆ ಜತೆಗೆ ಉಚ್ಚಾಯಿ ಮೆರವಣಿಗೆ ಖಟ್ವಾಂಗೇಶ್ವರ ಮಠದಿಂದ ವೀರಭದ್ರೇಶ್ವರ ದೇವಾಲಯದವರೆಗೆ ನಡೆಯಲಿದೆ.
ಏ.28ರಿಂದ 30ವರೆಗೆ ಸುಲೇಪೇಟದ ವರ್ತಕರ ಸಂಘ ಮತ್ತು ದೇವಾಲಯದ ಸಮಿತಿ ವತಿಯಿಂದ ಮಹಾಪ್ರಸಾದ ಆಯೋಜಿಸಲಾಗಿದೆ. 29ರಂದು ಮಧ್ಯಾಹ್ನ ಮುಂಬಯಿ ಕಲಾವಿದರಿಂದ ನಾಸಿಕ ಡೋಲು ಸೇವೆ 4 ಗಂಟೆಗಳ ಕಾಲ ಮುಖ್ಯಬೀದಿಯಲ್ಲಿ ನಡೆಯಲಿದೆ.
ಏ.3ರಂದು ಬೆಳಿಗ್ಗೆ ಜಂಗಿ ಪೈಲ್ವಾನರ ಕುಸ್ತಿ, ರಾತ್ರಿ ಬಣ್ಣದ ಒಕುಳಿ ಮತ್ತು ಮದ್ದು ಸುಡುವ ಕಾರ್ಯಕ್ರಮ ನಡೆಸುವ ಮೂಲಕ ಜಾತ್ರೆಗೆ ತೆರೆ ಬೀಳಲಿದೆ. ಮೇ 1ರಂದು ರಾತ್ರಿ ಸುಲೇಪೇಟ ಯುವಕರಿಂದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.