ಕಲಬುರ್ಗಿ: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಿಲ್ಲೆಯ 24 ಜನರು ವಿವಿಧ ಹುದ್ದೆಗಳಿಗೆ ಆಯ್ಕೆಯಾಗಿದ್ದು, ಅದರಲ್ಲಿ ಮೂವರಿಗೆ ಉಪವಿಭಾಗಾಧಿಕಾರಿ (ಎ.ಸಿ) ಹುದ್ದೆ ಒಲಿದಿದೆ.
ಸಿರನೂರನ ಸ್ಟೆಲ್ಲಾ ವರ್ಗೀಸ್ ಅವರು 25ನೇ ರ್ಯಾಂಕ್ ಪಡೆದು ಅನಾಯಾಸವಾಗಿ ಉಪವಿಭಾಗಾಧಿಕಾರಿ ಹುದ್ದೆ ಗಿಟ್ಟಿಸಿಕೊಂಡಿದ್ದರೆ, ಹೈದರಾಬಾದ್ ಕರ್ನಾಟಕ ಮೀಸಲಾತಿಯಡಿ ಆಳಂದ ಪಟ್ಟಣದ ಗುರುನಾಥ ದಡ್ಡೆ ಹಾಗೂ ಅಫಜಲಪುರ ತಾಲ್ಲೂಕಿನ ಬಂಕಲಗಾ ಬಳಿಯ ಗೌರಾ (ಬಿ) ಗ್ರಾಮದ ಸಂತೋಷಕುಮಾರ್ ಉಪವಿಭಾಗಾಧಿಕಾರಿ ಹುದ್ದೆಗೆ ಆಯ್ಕೆಯಾಗಿದ್ದಾರೆ.
ನಗರದ ಬ್ರಹ್ಮಪುರ ನಿವಾಸಿ ಶಿವಪ್ರಿಯಾ ಕಡೇಚೂರ ಅವರು ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. ಎಂ.ಎಸ್.ಕೆ. ಮಿಲ್ ನಿವಾಸಿ ಪ್ರೇಮ್ ದತ್ತಾ, ಸಂಗಮೇಶ ಎಚ್ ಹಾಗೂ ಆಳಂದ ತಾಲ್ಲೂಕಿನ ಗೋಲಾ (ಬಿ) ಗ್ರಾಮದ ಶ್ರೀಮಂತ ಎಂ. ಚಿಂಚೋಳಿ ಅವರು ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರಾಗಿ ಆಯ್ಕೆಯಾದರು. ಚಿತ್ತಾಪುರ ತಾಲ್ಲೂಕಿನ ಅಲ್ಲಹಳ್ಳಿ ಗ್ರಾಮದ ಶಿವಕುಮಾರ ಕಸನೂರ ಹಾಗೂ ಕಲಬುರ್ಗಿಯ ಶಹಾಬಜಾರ್ ನಿವಾಸಿ ಶ್ರೀಯಾಂಕಾ ಧನಶ್ರೀ ಅವರು ಗ್ರೇಡ್ 2 ತಹಶೀಲ್ದಾರ್ ಹುದ್ದೆಗೆ ಆಯ್ಕೆಯಾಗಿದ್ದಾರೆ.
ನಗರದ ಸೇಡಂ ರಸ್ತೆಯ ಸುಂದರ ನಗರ ನಿವಾಸಿ ಅಪೂರ್ವಾ ಎಂ. ಕುಲಕರ್ಣಿ, ದೇವಲಗಾಣಗಾಪುರ ಬಳಿಯ ತೆಲ್ಲೂರು ನಿವಾಸಿ ಪ್ರಮೋದ ಜಿ.ಕೆ, ಶಕ್ತಿ ನಗರ ನಿವಾಸಿ ನೀಲಗಂಗಾ ಅವರು ಕಾರ್ಯನಿರ್ವಾಹಕ ಅಧಿಕಾರಿ/ ಸಹಾಯಕ ಕಾರ್ಯದರ್ಶಿ ಹುದ್ದೆಗೆ ಆಯ್ಕೆಯಾದರು.
ಪವನ್, ಅಫಜಲಪುರದ ಸಿದ್ದರಾಮ ಸಂಗೋಳಗಿ, ಜೇವರ್ಗಿಯ ಸುನಿಲ್ಕುಮಾರ್ ಭಾವಿಕಟ್ಟಿ, ಅಂಬಾದಾಸ್ ಕಾಂಬಳೆ ಅವರು ವಾಣಿಜ್ಯ ತೆರಿಗೆ ಅಧಿಕಾರಿಗಳಾಗಿ ಆಯ್ಕೆಯಾದರು.
ಚಿಂಚೋಳಿಯ ಶಿವರಾಮ ನಾಯಕ ತಾಂಡಾದ ಶಿವರಾಜ ರಾಠೋಡ ಮುಖ್ಯಾಧಿಕಾರಿ ಹುದ್ದೆಗೆ ಆಯ್ಕೆಯಾದರು. ಕುಸನೂರ ರಸ್ತೆಯ ಕಿಶೋರ ಕುಮಾರ್, ಶಾಹಿನ್ ಅಖ್ತರ್, ಚಿತ್ತಾಪುರದ ಆರ್. ಪವನ್ಕುಮಾರ್, ಶೈಲಜಾ ಅವರು ಸಹಕಾರ ಸಂಘಗಳ ಸಹಾಯಕ ಉಪನಿಬಂಧಕರ ಹುದ್ದೆಗೆ ಅರ್ಹತೆ ಪಡೆದಿದ್ದಾರೆ.