ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25ರಂದು ಕಲಬುರಗಿಯಲ್ಲಿ ಕೆಆರ್‌ಎಸ್‌ ಜನಚೈತನ್ಯ ಯಾತ್ರೆ

Last Updated 23 ಜುಲೈ 2022, 8:55 IST
ಅಕ್ಷರ ಗಾತ್ರ

ಕಲಬುರಗಿ: ‘ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಆರಂಭಿಸಿರುವ ಎರಡನೇ ಹಂತದ ಜನಚೈತನ್ಯ ಯಾತ್ರೆಯು ಸೋಮವಾರ (ಜುಲೈ 25ರಂದು) ಕಲಬುರಗಿಗೆ ಬರಲಿದೆ’ ಎಂದು ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಸೈಬಣ್ಣಾ ಜಮಾದಾರ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಕಲಬುರಗಿ ನಗರದ ಹುಮನಾಬಾದ್‌ ವರ್ತುಲ ರಸ್ತೆ ಬಳಿಯಿಂದ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ನೇತೃತ್ವದಲ್ಲಿ ಆರಂಭವಾಗುವ ಯಾತ್ರೆಯು, ಗಂಜ್‌, ಸೂಪರ್‌ ಮಾರ್ಕೆಟ್‌ ರಸ್ತೆ ಮೂಲಕ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ವೃತ್ತದಲ್ಲಿ ಸಮಾರೋಪಗೊಳ್ಳಲಿದೆ. ಯಾತ್ರೆಯ ಮಾರ್ಗಮಧ್ಯೆ ಬರುವ ತಹಶೀಲ್ದಾರ್‌ ಕಚೇರಿ, ಆರ್‌ಟಿಒ, ಪೊಲೀಸ್‌ ಠಾಣೆಗಳ ಬಳಿ ತೆರಳಿ ಲಂಚಮುಕ್ತ ಅಭಿಯಾನ ಕೈಗೊಳ್ಳುವುದರ ಜತೆಗೆ ಅಲ್ಲಿನ ಜನರ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಲಾಗುವುದು ಎಂದು ಹೇಳಿದರು.

‘ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ರಾಜ್ಯದಲ್ಲಿನ ಜೆಡಿಎಸ್‌, ಕಾಂಗ್ರೆಸ್‌ , ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ರಾಜ್ಯದ ಬಿಜೆಪಿಯದ್ದು ಶೇ 40 ಕಮಿಷನ್‌ ಸರ್ಕಾರ. ಕಾಮಗಾರಿಗಳಲ್ಲಿ ಅವ್ಯವಹಾರ, ಸರ್ಕಾರಿ ನೇಮಕಾತಿ ಅಕ್ರಮ, ವರ್ಗಾವಣೆ ದಂಧೆ, ಕೋವಿಡ್‌ ಹೆಸರಲ್ಲಿ ಬಿಜೆಪಿ ಸರ್ಕಾರ ಲೂಟಿ ಮಾಡಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಲೋಕಾಯುಕ್ತವನ್ನು ಹತ್ತಿಕ್ಕುವ ಕೆಲಸ ಮಾಡಿತು. ಇದೆಲ್ಲದರ ಪರಿಣಾಮ ರಾಜ್ಯದ ರಾಜಕೀಯ ಹಾಗೂ ಸಾಮಾಜಿಕ ಸ್ಥಿತಿ ಅಧೋಗತಿಗೆ ಬಂದಿದೆ’ ಎಂದು ದೂರಿದರು.

‘ರಾಜ್ಯದ ಇಂದಿನ ದುರಾಡಳಿತ ಹಾಗೂ ಮೂರು ಪಕ್ಷಗಳ ಪರಮಭ್ರಷ್ಟ, ನೀಚ ರಾಜಕಾರಣವನ್ನು ಕೊನೆಗಾಣಿಸಲು ಯಾತ್ರೆ ಕೈಗೊಂಡಿದ್ದು, ಕೆಆರ್‌ಎಸ್‌ ಪಕ್ಷವು ರಾಜ್ಯವನ್ನು ಸಧೃಢ ಹಾಗೂ ಭ್ರಷ್ಟಾಚಾರ ಮುಕ್ತ ರಾಜ್ಯ ನಿರ್ಮಾಣ ಮಾಡಲು ಶ್ರಮಿಸುತ್ತಿದೆ’ ಎಂದು ಹೇಳಿದರು.

‘ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 371 (ಜೆ) ಕಾಯ್ದೆಯು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಹಾಗಾಗಿ ಸರ್ಕಾರಿ ನೌಕರರಿಗೆ ಮುಂಬಡ್ತಿಯಲ್ಲಿ ತೊಂದೆಯಾಗುತ್ತಿದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿಲ್ಲ . ಸರ್ಕಾರ ‘ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ’ಯ ಹೆಸರನ್ನು ಮಾತ್ರ ಬದಲಾಯಿಸಿದೆ. ನಿಜವಾದ ಅಭಿವೃದ್ಧಿ ಕೆಲಸಗಳೇ ಆಗುತ್ತಿಲ್ಲ. ಕಾಮಗಾರಿಗಳೆಲ್ಲ ಕಳೆಪೆಯಿಂದ ಕೂಡಿ ಭಾರಿ ಅವ್ಯವಹಾರ ನಡೆಯುತ್ತಿದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ವಿಜಯ ಜಾಧವ, ಕಲಬುರಗಿ ತಾಲ್ಲೂಕು ಅಧ್ಯಕ್ಷ ವಿಜಯಕುಮಾರ ಮಠಪತಿ, ನಗರ ಅಧ್ಯಕ್ಷ ಶಿವಪುತ್ರ ಗರೂರ, ಉಪಾಧ್ಯಕ್ಷ ಅಮರ ಮಹಗಾಂವಕರ, ಮುಖಂಡ ಅಭಿಷೇಕ್‌ ಹಾಜರಿದ್ದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಕಲ್ಯಾಣ ಕರ್ನಾಟಕ ಮಹೋತ್ಸವ ನಡೆಸುವುದು ಬೇಡ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಇಂದಿಗೂ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ, ಸೂಕ್ತ ರಸ್ತೆ, ಬಸ್‌ ಸಂಪರ್ಕಗಳಿಲ್ಲ. ನಿಜವಾಗಿಯೂ ಕಲ್ಯಾಣ ಮಾಡಿದ ನಂತರ ಉತ್ಸವ ಆಚರಿಸಿ.

- ಸೈಬಣ್ಣಾ ಜಮಾದಾರ, ರಾಜ್ಯ ಸಂಘಟನಾ ಕಾರ್ಯದರ್ಶಿ, ಕೆಆರ್‌ಎಸ್‌ ಪಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT