ಕಲಬುರಗಿ: ನಗರ ಹೊರವಲಯದ ತಾಜ್ ಸುಲ್ತಾನಪುರದಲ್ಲಿರುವ ಕೆಎಸ್ಆರ್ಪಿ ವಸತಿ ಪ್ರದೇಶದಲ್ಲಿ ಪ್ರತಿಷ್ಠಾಪನೆ ಮಾಡಲು ತಂದ ಚಾಮುಂಡೇಶ್ವರಿ ಮೂರ್ತಿ ಹಾಗೂ ಕಳಸವನ್ನು ಸೋಮವಾರ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು. ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದ ಸದಸ್ಯರು ಸಂಭ್ರಮದಿಂದ ದೇವತೆಯನ್ನು ಬರಮಾಡಿಕೊಂಡರು.
ಕೆಎಸ್ಆರ್ಪಿ ಆವರಣದ ಗೇಟ್ನಿಂದ ದೇವಸ್ಥಾನದವರೆಗೂ ಟ್ರ್ಯಾಕ್ಟರ್ನಲ್ಲಿ ಮಹಿಷಾಸುರ ಮರ್ದಿನಿಯ ಮೂರ್ತಿಯನ್ನು ಕೊಂಡೊಯ್ಯಲಾಯಿತು. ಮುಂದೆ ವಾದ್ಯಮೇಳ, ಅದರ ಹಿಂದೆ ಮಹಿಳೆಯರು ಹಾಗೂ ಯುವತಿಯರು ಪೂರ್ಣಕುಂಭ– ಕಲಶ, ಆರತಿಗಳನ್ನು ಹಿಡಿದು ಸಾಗಿದರು. ಬಹಳ ವರ್ಷಗಳ ನಂತರ ಪೊಲೀಸ್ ಕುಟುಂಬಗಳಲ್ಲಿ ಈ ದೇವಿಯ ಉತ್ಸವ ಹಾಗೂ ಹಬ್ಬದ ಸಂಭ್ರಮ ಮನೆ ಮಾಡಿತು.
ಸಿಬ್ಬಂದಿಯಿಂದಲೇ ಜೀರ್ಣೋದ್ಧಾರ: ಕೆಎಸ್ಆರ್ಪಿ ಮೈದಾನದಲ್ಲಿ ಆಲದ ಮರ ಹಾಗೂ ಬೇವಿನ ಮರಗಳು ಒಂದಕ್ಕೊಂದು ತಳಕು ಹಾಕಿಕೊಂಡು ಬೆಳೆದಿವೆ. ಇದೇ ಜಾಗದಲ್ಲಿ ಹಿರಿಯರು ಚಿಕ್ಕ ದೇವಸ್ಥಾನ ಕಟ್ಟಿ ಚಾಮುಂಡಿ ಮೂರ್ತಿ ಇಟ್ಟಿದ್ದರು. ಈಗ ಸಿಬ್ಬಂದಿಗಳೆಲ್ಲರೂ ಸೇರಿ ತಮ್ಮ ಸ್ವಂತ ಹಣದಿಂದ ದೇವಸ್ಥಾನ ಜೀರ್ಣೋದ್ಧಾರ ಮಾಡಿ ದೊಡ್ಡದಾಗಿಸಿದ್ದಾರೆ.
ನವರಾತ್ರಿ ಉತ್ಸವದ ಅಂಗವಾಗಿ ಮಂಗಳವಾರ (ಅಕ್ಟೋಬರ್ 12) ಚಾಮುಂಡಿಯ ಮೂರ್ತಿ ಪ್ರತಿಷ್ಠಾಪನೆ, ಅಭಿಷೇಕ, ಉಡಿ ತುಂಬುವ ಕಾರ್ಯಕ್ರಮ ಮುಂತಾದ ಪೂಜಾಕಾರ್ಯಗಳು ನೆರವೇರಲಿವೆ ಎಂದು ಮುಖಂಡರು ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.