ಕಲಬುರ್ಗಿ:ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಆರು ವಿಭಾಗಗಳ ಅಧಿಕಾರಿಗಳ ಸಭೆ ಹಾಗೂ ಪ್ರಗತಿ ಪರಿಶೀಲನಾ ಸಭೆಯನ್ನು ಸೆ 15ರಂದು ಬೆಂಗಳೂರಿನಲ್ಲಿ ಕರೆಯಲಾಗಿದ್ದು, ಹೊಸ ಯೋಜನೆಗೆ ಸ್ಪಷ್ಟ ರೂಪ ದೊರೆಯಲಿದೆ ಎಂದು ಮಂಡಳಿ ಅಧ್ಯಕ್ಷ, ಸುರಪುರ ಶಾಸಕ ನರಸಿಂಹ ನಾಯಕ (ರಾಜೂಗೌಡ) ತಿಳಿಸಿದರು.
ಆರು ವಿಭಾಗಗಳಲ್ಲಿ ಈಗಾಗಲೇ ಕೈಗೆತ್ತಿಕೊಂಡಿರುವ ಯೋಜನೆಗಳು ಮತ್ತು ಹೊಸದಾಗಿ ರೂಪಿಸಬೇಕಾಗಿರುವ ಯೋಜನೆ ಕುರಿತು ಅವರಿಂದ ಮಾಹಿತಿ ಪಡೆದುಕೊಂಡು ಪ್ರಗತಿ ಪರಿಶೀಲನೆ ನಡೆಸಲಾಗುವುದು. ಮಂಡಳಿ ವ್ಯವಸ್ಥಾಪಕ ನಿರ್ದೇಶಕರು ದಿನಾಂಕ ನಿಗದಿಪಡಿಸಿದ್ದು, ಈ ಸಭೆಯಲ್ಲಿ ಮಂಡಳಿಯ ಸಮಗ್ರ ಮಾಹಿತಿ ಸಿಗಲಿದೆ ಎಂದು ಸೋಮವಾರ ನಗರದಲ್ಲಿ ತಿಳಿಸಿದರು.
‘ಅಧಿಕಾರ ವಹಿಸಿಕೊಂಡ ನಂತರ ಸಭೆ ನಿಗದಿಪಡಿಸಲಾಗಿತ್ತು. ಆದರೆ, ಅಧಿಕಾರಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ ಸಭೆ ನಡೆಸಲಾಗಲಿಲ್ಲ. ಈಗ ಸಭೆ ನಡೆಯಲಿದೆ’ ಎಂದು ಹೇಳಿದರು.
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರೊಂದಿಗೆ ಚರ್ಚೆ ನಡೆಸಿ, ಮಂಡಳಿಯ ಆಡಳಿತ ಮಂಡಳಿಯ ಸಭೆಯನ್ನು ನಡೆಸಿ ಹೊಸ ಯೋಜನೆಗಳಿಗೆ ರೂಪ ನೀಡಲಾಗುವುದು. ಕಲಬುರ್ಗಿ ನಗರಕ್ಕೆ ನಿರಂತರ ನೀರು ಪೂರೈಕೆ ಸೇರಿದಂತೆ ಹಲವು ಯೋಜನೆಗಳ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜೂಗೌಡ ತಿಳಿಸಿದರು.
ಈ ಹಿಂದೆ ಆರಂಭಿಸಿರುವ ಯೋಜನೆಗಳು ಮಂದವಾಗಿ ನಡೆಯುತ್ತಿದ್ದು, ಅವುಗಳನ್ನು ವೇಗಗೊಳಿಸಲಾಗುವುದು. ಒಂದಿಷ್ಟು ನಗರ ನೀರು ಸರಬರಾಜು ಹೊಸ ಯೋಜನೆಗಳಿಗೆ ಸ್ಥಳೀಯವಾಗಿಯೇ ಟೆಂಡರ್ ಆಹ್ವಾನಿಸಲು ಅನುಮತಿ ನೀಡುವ ಚಿಂತನೆ ಇದೆ ಎಂದರು.