ಆಳಂದ: ಪಟ್ಟಣದ ಪ್ರಸಿದ್ದ ಸೂಫಿ ಸಂತ ಹಜರತ್ ಲಾಡ್ಲೆ ಮಶಾಕ್ ಅನ್ಸಾರಿ ಅವರ 665ನೇ ಜಾತ್ರೆ (ಉರುಸ್) ನ.25ರಿಂದ 4 ದಿನಗಳ ಕಾಲ ಜರುಗಲಿದೆ.
ಕೊರೊನಾ ಕಾರಣದಿಂದ ಈ ಬಾರಿ ಜಾತ್ರೆಯನ್ನು ಸರಳ ಧಾರ್ಮಿಕ ಆಚರಣೆ ಹಾಗೂ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಹಮ್ಮಿಕೊಳ್ಳಲಾಗಿದೆ ಎಂದು ದರ್ಗಾ ಸಮಿತಿ ಅಧ್ಯಕ್ಷ ಹಮೀದ್ ಅನ್ಸಾರಿ, ಕಾರ್ಯದರ್ಶಿ ಖಲೀಲ್ ಅನ್ಸಾರಿ ತಿಳಿಸಿದರು.
ನ.25ರಂದು ಸಂಜೆ 5ಕ್ಕೆ ತಹಶೀಲ್ದಾರ್ ಕಚೇರಿಯಲ್ಲಿ ಖವ್ವಾಲಿ ಮತ್ತಿತರ ಧಾರ್ಮಿಕ ಆಚರಣೆ ನಂತರ ಅಲ್ಲಿಂದ ಗಂಧೋತ್ಸವ (ಸಂದಲ್) ಮೆರವಣಿಗೆಯು ಮುಖ್ಯ ಬೀದಿಗಳ ಮೂಲಕ ದರ್ಗಾವರೆಗೆ ನಡೆಯಲಿದೆ. 26ರಂದು ಸಂಜೆ ದರ್ಗಾ ಆವರಣದಲ್ಲಿ ದೀಪೋತ್ಸವ (ಜಸ್ನೆ ಚಿರಾಗ್) ಮತ್ತು ಮುಂಬೈ ಹಾಗೂ ಹೈದಾರಾಬಾದ್ನ ಕಲಾವಿದರಿಂದ ಖವ್ವಾಲಿ ಗಾಯನ ಹಮ್ಮಿಕೊಳ್ಳಲಾಗಿದೆ. 28ರಂದು ವಿವಿಧ ಧಾರ್ಮಿಕ ಆಚರಣೆ ಹಾಗೂ ಲಾಡ್ಲೆ ಮಶಾಕ್ರ ಧಾರ್ಮಿಕ ಕೊಡುಗೆ ಮತ್ತು ಚಿಂತನೆ ಕುರಿತು ಉಪನ್ಯಾಸ ಏರ್ಪಡಿಸಲಾಗಿದೆ ಎಂದು ಕಾರ್ಯದರ್ಶಿ ಖಲೀಲ ಅನ್ಸಾರಿ ತಿಳಿಸಿದರು.
ಈ ಬಾರಿ ಕೋವಿಡ್ ಕಾರಣ ತಾಲ್ಲೂಕು ಆಡಳಿತ ಮತ್ತು ದರ್ಗಾ ಸಮಿತಿಯು ಜಾತ್ರೆಯಲ್ಲಿ ಜನದಟ್ಟಣೆ ಸೇರದಂತೆ ಎಚ್ಚರ ವಹಿಸಲಿವೆ. ದರ್ಗಾಕ್ಕೆ ಆಗಮಿಸುವ ಭಕ್ತರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ನಿಗದಿತ ಅಂತರ ಪಾಲನೆ ಮಾಡಬೇಕು ಎಂದು ತಿಳಿಸಲಾಗಿದೆ ಎಂದು ಅಧ್ಯಕ್ಷ ಹಮೀದ್ ಅನ್ಸಾರಿ ತಿಳಿಸಿದರು.
ಜಾತ್ರೆಯ ಅಂಗವಾಗಿ ದರ್ಗಾ ಹಾಗೂ ಮಿನಾರ್ಗಳ ದೀಪಾಲಂಕಾರ, ಸುಣ್ಣಬಣ್ಣ ಸೇರಿದಂತೆ ಆವರಣ ಸ್ವಚ್ಛತೆ ಕಾರ್ಯವು ಭರದಿಂದ ಸಾಗಿದೆ.