ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಕ್ಕೆ ತಂಪೆರೆದ ಮಳೆ

Last Updated 3 ಮೇ 2018, 19:25 IST
ಅಕ್ಷರ ಗಾತ್ರ

ಬೆಂಗಳೂರು: ಬೆಳಿಗ್ಗೆಯಿಂದ ಸಂಜೆಯವರೆಗೆ ಅಬ್ಬಾ... ಸಾಕಪ್ಪ ಎನ್ನುವಷ್ಟು ಬಿಸಿಲು. ರಾತ್ರಿ ಗಾಳಿ, ಮಳೆ, ಗುಡುಗು– ಸಿಡಿಲಿನ ಆರ್ಭಟ. ಕಳೆದೊಂದು ವಾರದಿಂದ ಈ ಜುಗುಲ್‌ ಬಂದಿಗೆ ನಗರ ಸಾಕ್ಷಿಯಾಗಿದೆ.

ಗುರುವಾರವೂ ಉದ್ಯಾನ ನಗರಿಯಲ್ಲಿ ಮಳೆ ಸುರಿಯಿತು. ಆರಂಭದಲ್ಲಿ ಬಿರುಸಿನಿಂದ ಸುರಿದ ಮಳೆ ಬಳಿಕ ಹನಿಹನಿಯಾಗಿ ಧರೆಗಿಳಿಯಿತು. ಮಳೆಯೊಂದಿಗೆ ಗುಡುಗು– ಸಿಡಿಲಿನ ಆರ್ಭಟವೂ ಜೋರಾಗಿತ್ತು. ಉರಿ ಬಿಸಿಲಿನಲ್ಲಿ ಚುನಾವಣಾ ಪ್ರಚಾರ ನಡೆಸಿ, ದಣಿದು ರಾತ್ರಿ ಮರಳಿದ ಪಕ್ಷದ ಅಭ್ಯರ್ಥಿಗಳಿಗೆ, ನಾಯಕರಿಗೆ, ಕಾರ್ಯಕರ್ತರಿಗೆ ಮಳೆ ಹಿತಾನುಭವ ನೀಡಿತು.

ನಿಟ್ಟುಸಿರು ಬಿಟ್ಟರು:

ಕೆಂಗೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಆಯೋಜಿಸಲಾಗಿತ್ತು. ಈ ಭಾಗದಲ್ಲಿ ಸಂಜೆ 4 ಗಂಟೆ ಸುಮಾರಿಗೆ ಮೋಡ ಕವಿದ ವಾತಾವರಣವಿತ್ತು. ಕಾರ್ಯಕ್ರಮಕ್ಕೆ ಮಳೆ ಅಡ್ಡಿ ಮಾಡಲಿದೆ ಎಂದು ಸಂಘಟಕರು ಆತಂಕಕ್ಕೆ ಒಳಗಾಗಿದ್ದರು. ಆದರೆ, ಕಾರ್ಯಕ್ರಮ ಮುಗಿದ ಒಂದು ಗಂಟೆಯ ಬಳಿಕ ಮಳೆ ಸುರಿಯಿತು. ಸಂಘಟಕರೂ ನಿಟ್ಟುಸಿರು ಬಿಟ್ಟರು.

ಮಲ್ಲೇಶ್ವರಂ, ಶ್ರೀರಾಂಪುರ,  ರಾಜಾಜಿನಗರ, ಸುಬ್ರಮಣ್ಯನಗರ, ಮಹಾಲಕ್ಷ್ಮಿ ಬಡಾವಣೆ, ರಾಜ್‌ಗೋಪಾಲ್‌ ನಗರ, ನಂದಿನ ಬಡಾವಣೆ, ಯಶವಂತಪುರ, ಆರ್‌ಎಂಸಿ ಯಾರ್ಡ್‌, ಪೀಣ್ಯ, ಸೋಲದೇವನಹಳ್ಳಿ, ಗಂಗಮ್ಮನ ಗುಡಿ, ಜಾಲಹಳ್ಳಿ, ವಿದ್ಯಾರಣ್ಯಪುರ, ಜೆ.ಸಿ. ನಗರ, ಸಂಜಯ ನಗರ,  ಹೆಬ್ಬಾಳ, ಆರ್‌.ಟಿ.ನಗರದಲ್ಲಿ ಮಳೆಯಾಗಿದೆ.

ಪಶ್ವಿಮ ವಲಯದ ಚಿಕ್ಕಪೇಟೆ, ಉಪ್ಪಾರಪೇಟೆ, ಸಿಟಿ ಮಾರ್ಕೆಟ್‌, ಕಲಾಸಿಪಾಳ್ಯ, ಕಾಟನ್‌ಪೇಟೆ, ಬ್ಯಾಟರಾಯನಪುರ, ಆರ್.ಆರ್.ನಗರ, ವಿಜಯ ನಗರ, ಬಸವೇಶ್ವರ ನಗರದಲ್ಲೂ ಉತ್ತಮ ಮಳೆಯಾಗಿದೆ. ಆದರೆ, ಬಿಬಿಎಂಪಿ ವ್ಯಾಪ್ತಿಯ ದಕ್ಷಿಣ ವಲಯದಲ್ಲಿ ತುಂತುರು ಮಳೆಯಾಗಿದೆ.

ಗ್ರಾಮೀಣ ಭಾಗದಲ್ಲೂ ಉತ್ತಮ ಮಳೆ:

ನಗರಕ್ಕೆ ಹೊಂದಿಕೊಂಡಿರುವ ಗ್ರಾಮೀಣ ಪ್ರದೇಶಗಳಲ್ಲೂ ಕಳೆದೊಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದರು, ರೈತರಲ್ಲಿ ಹರ್ಷತಂದಿದ್ದು, ಕೃಷಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ.

ಏಪ್ರಿಲ್‌ನಲ್ಲಿ ಪೂರ್ವ ಮುಂಗಾರಿನ ಆರ್ಭಟ ಶುರುವಾದ ನಂತರ ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕೃಷಿ ಚಟುವಟಿಕೆಗಳಿಗೆ ಚಾಲನೆ ಸಿಗುತ್ತದೆ. ಅಶ್ವಿನಿ ಮಳೆಗೆ ಹೊಲಗಳನ್ನು ಬಿತ್ತಲು ಹದ ಮಾಡಿಕೊಂಡರೆ, ನಂತರ ಸುರಿಯುವ ಭರಣಿ ಮಳೆಗೆ ಎಳ್ಳು, ಜೋಳ, ಹಲಸಂದೆ ಕಾಳುಗಳನ್ನು ಬಿತ್ತುವುದು ರೂಢಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT