ತಾಲ್ಲೂಕಿನಲ್ಲಿ ಸರಿ ಸುಮಾರು 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಜೋಳದ ಬೇಸಾಯ ನಡೆಯುತ್ತಿದೆ. ಕುಂಚಾವರಂ ಸುತ್ತಲೂ ಬಿಳಿ ಜೋಳದ ಬೇಸಾಯ ಕಡಿಮೆ. ಚಿಮ್ಮನಚೋಡ, ಸುಲೇಪೇಟ ಹಾಗೂ ಕೋಡ್ಲಿ, ಚಿಂಚೋಳಿ ರೈತ ಸಂಪರ್ಕ ಕೇಂದ್ರಗಳ ವ್ಯಾಪ್ತಿಯಲ್ಲಿ ಬೆಳೆಯು ಉತ್ತಮ ಬೆಳವಣಿಗೆ ಹಂತದಲ್ಲಿದೆ ಎನ್ನುತ್ತಾರೆ ಚಿಂಚೋಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರಕಾಶ ರಾಠೋಡ್.ಎರಡು ದಶಕಗಳ ಹಿಂದೆ ಎಲ್ಲಿ ನೋಡಿದರಲ್ಲಿ ಜೋಳದ ಬೆಳೆ ಕಾಣಿಸುತ್ತಿತ್ತು. ಹಿರಿ ಬಿತ್ತನೆ ಎಂದೇ ಜೋಳ ಹೆಸರಾಗಿತ್ತು. ಆದರೆ ಈಗ ಅದು ಕಿರಿ ಬಿತ್ತನೆಯಾಗಿದೆ. ರೈತರು ತಮ್ಮ ಕುಟುಂಬಕ್ಕೆ ಬೇಕಾದಷ್ಟು ಜೋಳ ಬೇಸಾಯ ನಡೆಸಿದರೆ ಉಳಿದ ಹೊಲಗಳಲ್ಲಿ ಬೇರೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಕೆಲವರು ಬೆಳೆ ಬದಲಾವಣೆ ನಿಟ್ಟಿನಲ್ಲಿ ಜೋಳ ಬೇಸಾಯ ಮಾಡುತ್ತಿದ್ದಾರೆ.