ಕಲಬುರ್ಗಿ: ಕೌಟುಂಬಿಕ ವಿಷಯಕ್ಕೆ ಸಂಬಂಧಿಸಿದಂತೆ ಉಂಟಾದ ಮನಸ್ತಾಪವು ಗಂಭೀರ ಸ್ವರೂಪಕ್ಕೆ ತಿರುಗಿದ ಪರಿಣಾಮ ನಗರದ ಆಳಂದ ನಾಕಾ ಸಮೀಪದ ಶಿವಲಿಂಗೇಶ್ವರ ಕಾಲೊನಿಯಲ್ಲಿ ರಾಮಣ್ಣ ಸಿದ್ರಾಮಪ್ಪ ಜಮಾದಾರ (44) ಎಂಬುವರ ಮೇಲೆ ದುಷ್ಕರ್ಮಿಗಳು ಗಂಭೀರ ಹಲ್ಲೆ ನಡೆಸಿದ್ದಾರೆ.
ಟಿಪ್ಪರ್ ಚಾಲಕರಾಗಿ ಕೆಲಸ ಮಾಡುತ್ತಿರುವ ರಾಮಣ್ಣ ಕಾಲೊನಿಯಲ್ಲಿನ ತಮ್ಮ ಮನೆ ಎದುರಿಗೆ ಕೊಠಡಿ ಖಾಲಿ ಇದ್ದುದರಿಂದ ತಮ್ಮ ಪರಿಚಯದ ಇಬ್ಬರಿಗೆ ಕೊಡಿಸಿದ್ದರು. ಆದರೆ, ಆ ಕೊಠಡಿ ಹಂಚಿಕೆ ವಿಚಾರವಾಗಿ ರಾಜಪ್ಪ ಶಿವಶರಣಪ್ಪ ಪೂಜಾರಿ ಅವರಿಗೆ ಅಸಮಾಧಾನವಿತ್ತು. ಹೀಗಾಗಿ, ಸರಿಯಾಗಿ ಮನೆ ಹಂಚಿಕೆ ಆಗಿಲ್ಲ. ಹೀಗಾಗಿ ನೀನೇಕೆ ಹುಡುಗರನ್ನು ಕರೆದುಕೊಂಡು ಬಂದಿದ್ದೀಯ ಎಂದು ಪ್ರಶ್ನಿಸಿ, ಸೆ.17ರಂದು ರಾಮಣ್ಣ ಜಮಾದಾರ ಅವರ ಮೇಲೆ ಕುರುಪಿ ಹಾಗೂ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ರಾಮಣ್ಣ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ದೂರನ್ನು ಆಧರಿಸಿ ಪೊಲೀಸರು ರಾಜಪ್ಪ ಪೂಜಾರಿ, ಆತನ ಪುತ್ರ ಜಟ್ಟೆಪ್ಪ ಹಾಗೂ ರಾಜಪ್ಪನ ಪತ್ನಿ ಯಲ್ಲಮ್ಮ ಎಂಬುವವರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ಭಾರಿ ಗಾಯವಾಗಿದ್ದರೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿಲ್ಲ. ಆರೋಪಿಗಳನ್ನು ಬಂಧಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ರಾಮಣ್ಣ ಜಮಾದಾರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.