ಕಡಕೋಳ ಮಡಿವಾಳೇಶ್ವರ ನಾಟಕ ಯಡ್ರಾಮಿಯಲ್ಲಿ ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿತು. ಬದುಕಿನಲ್ಲಿ ಏಳು ಬೀಳುಗಳನ್ನು ಕಂಡರೂ ನಾಟಕ ರಚನೆಯನ್ನು ಮುಂದುವರಿಸಿದೆ. ಹಲವಾರು ನಾಟಕ ಕಂಪನಿಗಳಲ್ಲಿ ಕೆಲಸ ಮಾಡಿದ ನಂತರ ನನ್ನದೇಯಾದ ಕಂಪನಿ ಕಟ್ಟಿ ಕೈಸುಟ್ಟುಕೊಂಡೆ. ಇದ್ದ ಮೂರು ಎಕರೆ ಜಮೀನೂ ಕಳೆದುಕೊಂಡೆ. ಇಷ್ಟೆಲ್ಲ ಆದರೂ ನನ್ನ ಬದುಕು ಆರಕ್ಕೇರಲಿಲ್ಲ. ಮೂರಕ್ಕೆ ಇಳಿಯಲಿಲ್ಲ. ನಾಟಕಗಳೇ ನನಗೆ ಧೈರ್ಯ ತುಂಬಿದವು. ಮನುಷ್ಯನಿಗೆ ಕಷ್ಟಗಳು ಬರಬೇಕು. ಕಷ್ಟಗಳ ಕುಲುಮೆಯಲ್ಲಿ ಬೆಂದಾಗಲೇ ಸ್ಫುಟವಾದ ಚಿನ್ನವಾಗಿ ಹೊರಹೊಮ್ಮಲು ಸಾಧ್ಯ. ರಂಗಭೂಮಿ ನನಗೆ ಸಾಕಷ್ಟು ನೀಡಿದೆ. ಕರ್ನಾಟಕ ರಾಜ್ಯೋತ್ಸವ, ಗುಬ್ಬಿ ವೀರಣ್ಣ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳು ಸಂದಿವೆ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವೂ ಸಿಕ್ಕಿದೆ. ಗುಲಬರ್ಗಾ ವಿ.ವಿ. ಎಂ.ಎ. ಪಠ್ಯದಲ್ಲಿ ನನ್ನ ನಮಸ್ಕಾರ ನಾಟಕ ಸೇರ್ಪಡೆಯಾಗಿತ್ತು ಎಂದರು.