ಶಿವಮೊಗ್ಗ: ನಗರದ ಮನೀಷಾ ವರುಣ್ ಈಚೆಗೆ ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿ ನಡೆದ 'ಡಾಜಲ್ ಮಿಸೆಸ್ ಇಂಡಿಯಾ ಯೂನಿವರ್ಸ್' ಸ್ಪರ್ಧೆಯಲ್ಲಿ ‘ಮಿಸೆಸ್ ಇಂಡಿಯಾ ಯೂನಿವರ್ಸ್' ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ಕಂಪ್ಯೂಟರ್ ಸೈನ್ಸ್ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿರುವ ಮನೀಷಾ ವರುಣ್ ಶಿವಮೊಗ್ಗದ ಮಾಳೂರು ಕುಟುಂಬದ ಸೊಸೆಯಾಗಿದ್ದಾರೆ. ಇವರು ಮೊದಲ ಯತ್ನದಲ್ಲೇ ಯೂನಿವರ್ಸ್ ಕಿರೀಟ ಮುಡಿಗೇರಿಸಿಕೊಳ್ಳುವ ಮೂಲಕ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಕಿರಿಯರ ವಿಭಾಗದ (25ರಿಂದ 35 ವರ್ಷ) ಸ್ಪರ್ಧೆಯಲ್ಲಿ ಮನೀಷಾ ಸ್ಪರ್ಧಿಸಿದ್ದರು. ಸ್ಪರ್ಧೆಯಲ್ಲಿ ರಾಷ್ಟ್ರದಾ
ದ್ಯಂತ 26 ಮಹಿಳೆಯರು ಪೈಪೋಟಿ ನೀಡಿದ್ದರು. ಒಟ್ಟು 8 ಸುತ್ತಿನ ಸ್ಪರ್ಧೆಯಲ್ಲಿ ಅಂತಿಮವಾಗಿ ಟಾಪ್ 5 ಸ್ಪರ್ಧಿಗಳ ನಡುವೆ ಸ್ಪರ್ಧೆ ನಡೆಯಿತು. ಅಂತಿಮವಾಗಿ ಮನೀಷಾ ವಿಜೇತರಾದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಅನುಭವ ಹಂಚಿಕೊಂಡ ಮನೀಷಾ, ‘ಇದೊಂದು ವಿಶಿಷ್ಟ ಸ್ಪರ್ಧೆಯಾಗಿತ್ತು. ಇದರಲ್ಲಿ ಭಾಗವಹಿಸಲು ಕೆಲವು ನಿಯಮಗಳು ಇದ್ದವು. ಪ್ರಮುಖವಾಗಿ ಮದುವೆಯಾಗಿರಬೇಕು ಮತ್ತು ಮಗು ಇರಬೇಕು ಎಂಬ ನಿಯಮ
ವಿತ್ತು. ಈ ಹಿಂದೆ ಶಿವಮೊಗ್ಗದಲ್ಲಿ ಜಿಲ್ಲಾಧಿಕಾರಿಯಾಗಿದ್ದ ಪಂಕಜ್ ಕುಮಾರ್ ಪಾಂಡೆಯವರ ಪತ್ನಿ ಅನುಜಾ ಪಾಂಡೆಯವರು ಸ್ಪರ್ಧೆಯ ಬಗ್ಗೆ ವಿವರ ನೀಡಿದ್ದರು. ಅಲ್ಲದೆ ಅವರಿಂದ ನಾಲ್ಕು ತಿಂಗಳು ತರಬೇತಿ ಕೂಡ ಪಡೆದುಕೊಂಡಿದ್ದೆ’ ಎಂದರು.
‘ಈ ಸ್ಪರ್ಧೆ ಗೆದ್ದವರಿಗೆ ಯಾವುದೇ ಬಹುಮಾನದ ಮೊತ್ತ ಇರಲಿಲ್ಲ. ಆದರೆ ಇದರ ಉದ್ದೇಶ ಮಾತ್ರ ಮೆಚ್ಚುವಂಥದ್ದು. ಮಹಿಳೆಯ ಮೇಲಿನ ದೌರ್ಜನ್ಯದ ತಡೆಗೆ ಏನು ಮಾಡಬಹುದು? ಯಾವ ಕ್ರಮ ತೆಗೆದುಕೊಳ್ಳಬಹುದು ಎಂಬೆಲ್ಲ ವಿಷಯಗಳು ಮುಖ್ಯವಾಗಿದ್ದವು. ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ತಮಗೆ ಯಾರು ರೋಲ್ ಮಾಡೆಲ್ ಎಂಬ ಪ್ರಶ್ನೆ ಕೇಳಿದರು. ಅದಕ್ಕೆ ನನ್ನ ತಾಯಿ ಹಾಗೂ ಅತ್ತೆ ಎಂಬ ಉತ್ತರ ನೀಡಿದೆ. ಇದು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಯಿತು’ ಎಂದು ಹೇಳಿದರು.
ಎಸ್.ವಿ. ಶಾಸ್ತ್ರಿ ಮಾತನಾಡಿ, ‘ಹೊಸಪೇಟೆಯ ಸುಧಾಕರ್ ಹಾಗೂ ಕಲ್ಪನಾ ದಂಪತಿಯ ಪುತ್ರಿ ಮನೀಷಾ ಇಲ್ಲಿನ ಅಡಿಕೆ ಮಂಡಿ ವರ್ತಕ ಎಂ.ಎಸ್.ವಿಜಯ್ ಕುಮಾರ್ ಪುತ್ರ ವರುಣ್ ಅವರ ಪತ್ನಿ. ಅವರಿಗೆ 10 ವರ್ಷದ ಮಾನ್ಯ ಹಾಗೂ 7 ವರ್ಷದ ಮಯಾಂಕ್ ಎಂಬ ಮಕ್ಕಳಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.