ಕಲಬುರಗಿ: ‘ವಿಧಾನಪರಿಷತ್ ಚುನಾವಣೆ ವೇಳೆ ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಕೇವಲ ಬಾಯಿಮಾತಲ್ಲಿ ಅಭಿವೃದ್ಧಿಯನ್ನು ತೋರಿಸಿ, ಗೆದ್ದು ಬಂದ ನಂತರ ಮತದಾರರನ್ನೇ ಮರೆತು ಬಿಡುವ ಹವ್ಯಾಸ ಬೆಳೆಸಿಕೊಂಡಿದ್ದಾರೆ’ ಎಂದು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಕೋಡ್ಲಿ ದೂರಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಮತದಾರರಲ್ಲಿ ಆಣೆ–ಪ್ರಮಾಣ ಮಾಡಿಸಿಕೊಳ್ಳುವ ಭಾವನಾತ್ಮಕವಾಗಿ ಸೆಳೆಯವ ಕುತಂತ್ರದಲ್ಲಿ ತೊಡಗಿದ್ದಾರೆ. ಹಾಲಿ ಸದಸ್ಯರೂ ಆದ ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ ಒಂದು ದಿನವೂ ಯಾವುದೇ ಪಂಚಾಯಿತಿಗೆ ಭೇಟಿ ನೀಡಿಲ್ಲ’ ಎಂದರು.
‘ಪಂಚಾಯಿತಿ ಸದಸ್ಯರ ಸಂಕಷ್ಟ ಅರಿಯುವ ಪ್ರಯತ್ನ ಮಾಡಿಲ್ಲ. ಚುನಾವಣೆಯನ್ನು ವ್ಯಾಪಾರ ಎಂಬಂತೆ ಭಾವಿಸಿದ್ದಾರೆ. ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಷಯವನ್ನೇ ಇಟ್ಟುಕೊಂಡು ಬಿಜೆಪಿ, ಕಾಂಗ್ರೆಸ್ನವರು ರಾಜಕೀಯ ಮಾಡಿಕೊಂಡಿದ್ದಾರೆ. ಆದರೆ, ಆ ಸಮಾಜದ ಬೇಡಿಕೆಯನ್ನು ಈಡೇರಿಸಲು ಆಗಿಲ್ಲ’ ಎಂದರು.
‘ಪ್ರಜಾತಾಂತ್ರಿಕ ವಿಧಾನದ ಮೂಲಕ ಚುನಾವಣೆ ಎದುರಿಸುವ ಬದಲು ಮತದಾರರನ್ನು ಭಾವನಾತ್ಮಕವಾಗಿ ಸೆಳೆಯುವ ಪ್ರಯತ್ನ ಮಾಡುತ್ತಿರುವುದು ಎಷ್ಟು ಸರಿ’ ಎಂದು ಅವರು ಪ್ರಶ್ನಿಸಿದರು.
‘ನಾನು ಚುನಾವಣೆಯಲ್ಲಿ ಗೆದ್ದರೆ ಪಂಚಾಯಿತಿ ಸದಸ್ಯರ ಗೌರವಧನ ಹೆಚ್ಚಳ, ವೈದ್ಯಕೀಯ ವೆಚ್ಚ ಸರ್ಕಾರವೇ ಭರಿಸುವ ಬಗ್ಗೆ ಒತ್ತಡ ಹೇರುವುದು ಹಾಗೂ ಪಂಚಾಯಿತಿಗಳ ಸ್ವಂತ ಕಟ್ಟಡಗಳ ನಿರ್ಮಾಣಕ್ಕೆ ಸಹಕರಿಸುವೆ’ ಎಂದರು.
ಮುಖಂಡರಾದ ವಿಜಯ ಜಾಧವ, ಸಂಗಮನಾಥ, ಪ್ರಕಾಶ ಪಟ್ಟೇದಾರ, ಮಹಾಂತೇಶ ತಳವಾರ ಇದ್ದರು.