ಕಲಬುರಗಿ: ಹಣದ ವಿಚಾರಕ್ಕಾಗಿ ಭಾವನನ್ನು ಭಾಮೈದರು ಕೊಲೆ ಮಾಡಿದ ಘಟನೆ ಬುಧವಾರ ತಡರಾತ್ರಿ ನಡೆದಿದೆ. ನಗರದ ಸಂತೋಷ್ ಕಾಲೊನಿಯ ನಿವಾಸಿ ಲಕ್ಷ್ಮಿಕಾಂತ(35) ಕೊಲೆಯಾದವರು.
ವಿಜಯದಶಮಿ ದಿನ ಬನ್ನಿ ವಿನಿಮಯದ ವೇಳೆ ಪತ್ನಿಯ ಸಹೋದರರಾದ ಶಿವಕಾಂತ್ ಮತ್ತು ಪ್ರಶಾಂತ್ ಎಂಬುವವರು ಮಾರಕಾಸ್ತ್ರಗಳಿಂದ ಲಕ್ಷ್ಮಿಕಾಂತ ಎಂಬುವವರ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರೀತಿ ಮತ್ತು ಲಕ್ಷ್ಮಿಕಾಂತ ಪ್ರೀತಿಸಿ ಮದುವೆಯಾಗಿದ್ದರು. ಲಕ್ಷ್ಮಿಕಾಂತ ಈಗಾಗಲೇ ಮದುವೆಯಾಗಿದ್ದು, ಇದು ಆತನ ಎರಡನೇ ಮದುವೆ ಆಗಿತ್ತು. ಮದುವೆಯ ಬಳಿಕ ಲಕ್ಷ್ಮಿಕಾಂತ ತನ್ನ ಪತ್ನಿಯ ಸಹೋದರರಿಗೆ ₹8 ಲಕ್ಷ ಸಾಲ ಕೊಟ್ಟಿದ್ದ. ಹಣ ವಾಪಸ್ ಕೊಡುವಂತೆ ಆಗಾಗ ಕೇಳುತ್ತಿದ್ದ. ಈ ಕುರಿತು ಅಕ್ಟೋಬರ್ 2ರಂದು ಹಣ ಕೋಡುವ ಬಗ್ಗೆ ಮಾತುಕತೆಯಾಗಿತ್ತು.
ಆದರೆ, ಹಣ ಕೊಡುವುದಕ್ಕೆ ಆಗದೆ ಇದ್ದಾಗ, ಶಿವಕಾಂತ್ ಮತ್ತು ಪ್ರಶಾಂತ್ ಸೇರಿ ಲಕ್ಷ್ಮಿಕಾಂತ ಅವರನ್ನು ಕೊಲೆ ಮಾಡಿದ ಶಂಕೆಯಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.