ಕಲಬುರಗಿ: ‘ಒತ್ತಡ ನಿವಾರಣೆಗೆ ಸಂಗೀತ ಉತ್ತಮ ಮದ್ದು. ಇದು ರೋಗ ನಿವಾರಕ ಶಕ್ತಿ ಹೊಂದಿದೆ’ ಎಂದು ರೇಣುಕಾಚಾರ್ಯ ಆಶ್ರಮದ ಸಿದ್ಧಾನಂದ ಶಿವಯೋಗಿಗಳು ಅಭಿಪ್ರಾಯಪಟ್ಟರು.
ಅನ್ನಪೂರ್ಣಾ ಪುರಾತನ ಕಲಾ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಇಲ್ಲಿನ ದಂಡಗುಂಡ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ನಡೆದ ಡಾ.ಪಂಡಿತ ಪುಟ್ಟರಾಜ ಗವಾಯಿಯವರ 11 ಪುಣ್ಯಸ್ಮರಣೋತ್ಸವ ಹಾಗೂ ಸಂಗೀತ ಸೌರಭ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ಸಂಗೀತ ಶಿಕ್ಷಣ ಅಗತ್ಯ. ಎಲ್ಲರೂ ಮಕ್ಕಳಿಗೆ ಸಂಗೀತ ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕು’ ಎಂದರು.
ಮಹಾನಗರ ಪಾಲಿಕೆ ಸದಸ್ಯ ಸಚಿನ್ ಕಡಗಂಚಿ,‘ಕಲೆ ಮತ್ತು ಕಲಾವಿದರು ದೇಶದ ಬಹುದೊಡ್ಡ ಆಸ್ತಿ. ಕಲಾವಿದರನ್ನು ಪ್ರೋತ್ಸಾಹಿಸುವ ಮೂಲಕ ಕಲೆ ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ’ ಎಂದರು.
ಸಂಸ್ಥೆ ಅಧ್ಯಕ್ಷ ಸಿದ್ದಯ್ಯ ಎಸ್.ಹಿರೇಮಠ ಸುಂಟನೂರ ಮಾತನಾಡಿ,‘ಸಂಗೀತ ಮತ್ತು ಸಾಹಿತ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎರಡೂ ಕ್ಷೇತ್ರಗಳಲ್ಲಿಯೂ ಡಾ.ಪಂ.ಪುಟ್ಟರಾಜ ಗವಾಯಿಯವರ ಕೊಡುಗೆ ಅಪಾರ’ ಎಂದರು.
ರಾಚಣ್ಣ ಗಟಿಬ್ಯಾಳಿ, ವೀರಶೈವ ಮಹಾಸಭಾದ ಸದಸ್ಯೆ ಶಾರದ ವಿ.ಸಿ.ಪಾಟೀಲ, ಅರ್ಚನಾ ಕುಶಾಲ ಪಾಟೀಲ ಹಾಗೂ ಸಂಸ್ಥೆ ಕಾರ್ಯದರ್ಶಿ ಬಂಡಯ್ಯಸ್ವಾಮಿ ಹಿರೇಮಠ ಇದ್ದರು.
ಕಲಾವಿದರಾದ ಬಾಬುರಾವ್ ಕೋಬಾಳ, ಅಣ್ಣಾರಾಯ ಮತ್ತಿಮಡು, ಸೈದಪ್ಪ ಚೌಡಾಪುರ, ಮಲ್ಲಿಕಾರ್ಜುನ ಬಾಗೇವಾಡಿ ಮಣೂರು, ತೋಟಯ್ಯ ಶಾಸ್ತ್ರಿ ಅಬ್ಬೆತುಮಕೂರು, ಸ್ವರೂಪ ವಾಲಿ, ನಾಗೇಶ್ರೀ ಕೋಣೆ, ನಿರ್ಮಲಾ ಕೋಣೆ, ಸಹನಾ ಕೋಡ್ಲಿ ಭಾಗ್ಯಶ್ರೀ ಹಿರೇಮಠ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.