ಸೇಡಂ: ‘ಸುಭದ್ರ ಭಾರತ ನಿರ್ಮಾಣದಲ್ಲಿ ಯುವಶಕ್ತಿ ಕೊಡುಗೆ ಅಪಾರ. ಮತದಾನ ಹೆಚ್ಚಳಕ್ಕೆ ಯುವಜನತೆಯಲ್ಲಿ ಹೆಚ್ಚಿನ ಜಾಗೃತಿ ಬೇಕಾಗಿದೆ’ ಎಂದು ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘18 ವರ್ಷ ತುಂಬಿದ ಪ್ರತಿಯೊಬ್ಬರು ಸಹ ಚುನಾವಣೆಯ ಗುರುತಿನ ಚೀಟಿಯನ್ನು ಪಡೆದುಕೊಳ್ಳುವ ಮೂಲಕ ಮತದಾನದ ಹಕ್ಕನ್ನು ಪಡೆದುಕೊಳ್ಳಬೇಕು. ನನ್ನ ಒಂದು ಮತ ಎಲ್ಲಿ ಹಾಕಿದರಾಯಿತು ಎಂಬ ತಾತ್ಸಾರ ಮನೋಭಾವ ತಾಳದೆ, ಮತದಾನ ನಮ್ಮ ಹಕ್ಕು ಎಂದು ಉತ್ತಮ ವ್ಯಕ್ತಿಗೆ ಮತಹಾಕುವ ಮೂಲಕ ಜನಪ್ರತಿನಿಧಿಯನ್ನು ಆರಿಸಿ ತರಬೇಕು’ ಎಂದರು.
ಪ್ರಾಚಾರ್ಯ ಮಾಣಿಕರಾವ ಕುಲಕರ್ಣಿ ಮಾತನಾಡಿ, ‘ತಮಗೆ ಸಿಕ್ಕ ಹಕ್ಕು ಮತ್ತು ಅವಕಾಶಗಳನ್ನು ಯಾವತ್ತಿಗೂ ಸಹ ವಂಚಿತರಾಗದಂತೆ ನೋಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.
ರಾಷ್ಟ್ರೀಯ ಮತದಾರರ ದಿನಾಚರಣೆಯ ನಿಮಿತ್ತ ಕಾಲೇಜಿನಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ದೈಹಿಕ ಶಿಕ್ಷಣ ನಿರ್ದೇಶಕ ಜಗನ್ನಾಥ ಪಟ್ಟಣಕರ್, ಸಂತೋಷಸಿಂಗ ಬಯಾಸ್, ಎನ್.ಜಿ ಶ್ರೀಧರ, ಬಸವರಾಜ ಕೊನೆರಿ, ತಹಶೀಲ್ ಕಚೇರಿಯ ಪ್ರಶಾಂತ, ಪ್ರವೀಣ ರಾಠೋಡ ಇದ್ದರು.