ಚಿಂಚೋಳಿ: ಮಳೆಗಾಲದಲ್ಲಿ ಮಿಂಚಿ ಮರೆಯಾಗುವ ತಾಲ್ಲೂಕಿನ ನೆಲಗಂಗಿ ತಾಂಡಾ ಬಳಿಯ ‘ನೆಲಗಂಗಿ ಜಲಪಾತ’ವು ನಯನ ಮನೋಹರವಾಗಿದೆ.
ನೆಲಗಂಗಿ ತಾಂಡಾದಿಂದ ಕೇವಲ 200 ಮೀಟರ್ ಅಂತರದಲ್ಲಿರುವ ಶಿವರಾಮ ನಾಯಕ ತಾಂಡಾದ ಮಾರ್ಗದಲ್ಲಿ ಬರುವ ಈ ಪುಟ್ಟ ಜಲಪಾತಕ್ಕೆ ಸಲಗರ ಬಸಂತಪುರ ಹಾಗೂ ಬೆನಕೆಪಳ್ಳಿ ಕಡೆಯಿಂದ ಮಳೆನೀರು ತೊರೆಯಲ್ಲಿ ಹರಿದು ಬಂದು 20ರಿಂದ 25 ಅಡಿ ಎತ್ತರದಿಂದ ಧುಮ್ಮಿಕ್ಕುವ ಸೊಬಗು ಮನಮೋಹಕವಾಗಿದೆ.
ಸ್ಥಳೀಯರ ಪಾಲಿಗೆ ಪೂಜನೀಯ ತಾಣವೂ ಆಗಿರುವ ಈ ನೆಲಗಂಗಿ, ತಾಂಡಾವಾಸಿಗಳಿಗೆ ವಿಸ್ಮಯತಾಣವೂ ಆಗಿದೆ. ಬಿರು ಬೇಸಿಗೆಯಲ್ಲಿ ಸ್ಥಳೀಯರ ದಾಹ ನೀಗಿಸುವ ಜಲದಾತೆಯಾಗಿದ್ದಾಳೆ.
ದೊಡ್ಡ ಕಲ್ಲು ಬಂಡೆಗಳ ಕೆಳಭಾಗದಿಂದ ಜಿನುಗುವ ಸಿಹಿ ನೀರು ಕುಡಿಯಲು ತುಂಬ ಹಿತಕಾರಿಯಾಗಿದೆ. ಹಬ್ಬ ಹರಿದಿನ ಹಾಗೂ ಶುಭ ಕಾರ್ಯಗಳಿಗೆ ಪೂಜೆಗೆ ಜನರು ಇಲ್ಲಿಂದಲೇ ನೀರು ಒಯ್ಯುತ್ತಾರೆ. ಬಿರು ಬೇಸಿಗೆಯಲ್ಲಿಯೂ ಇದು ಬತ್ತುವುದಿಲ್ಲ ಎನ್ನುತ್ತಾರೆ ತಾಂಡಾದ ಯುವ ಮುಖಂಡ ರವಿ ಮೋತಿರಾಮ ನಾಯಕ್.
ಹಸಿರು ಮೈದುಂಬಿಕೊಂಡ ಗಿಡಗಳ ಚಿಕ್ಕ ಕಾಡು ಹಾಗೂ ರೈತರ ಜಮೀನಿನ ಬೆಳೆಗಳು ಜಲಪಾತದ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ. ಹಿರಿಯರೊಂದಿಗೆ ಪುಟಾಣಿಗಳು ನೋಡಿ ಆನಂದಿಸಲು ಅತ್ಯಂತ ಸೂಕ್ತವಾಗಿದೆ.
ಈ ಜಲಪಾತದ ಕೆಳಭಾಗದಲ್ಲಿ 200 ಮೀಟರ್ ಅಂತರದಲ್ಲಿ ದೊಡ್ಡದಾದ ಕಂದರವಿದ್ದು ಪ್ರಕೃತಿ ಸೌಂದರ್ಯಕ್ಕೆ ಸಾಕ್ಷಿಯಾಗಿದೆ.