ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಲ್ಲರೆ, ಸಗಟು ಹಣದುಬ್ಬರ ಏರಿಕೆ

ಕಚ್ಚಾ ತೈಲ ದರ ಏರಿಕೆಯ ಪರಿಣಾಮ: ತುಟ್ಟಿಯಾದ ವಿದ್ಯುತ್‌, ಇಂಧನ
Last Updated 14 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಚಿಲ್ಲರೆ ಮತ್ತು ಸಗಟು ಹಣದುಬ್ಬರಗಳು ಏಪ‍್ರಿಲ್‌ ತಿಂಗಳಿನಲ್ಲಿ ಏರಿಕೆ ಕಂಡಿವೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ ಬಡ್ಡಿದರ ಕಡಿತ ಮಾಡಬೇಕು ಎನ್ನುವ ಉದ್ಯಮದ ಒತ್ತಾಯಕ್ಕೆ ಇದರಿಂದ ಮತ್ತಷ್ಟು ಬಲ ಬಂದಂತೆ ಆಗಿದೆ.

2018ರ ಜನವರಿಯಿಂದ ಇಳಿಮುಖವಾಗಿದ್ದ ಚಿಲ್ಲರೆ ಹಣದುಬ್ಬರ ಮತ್ತೆ ಏರುಮುಖ ಹಾದಿಗೆ ಹೊರಳಿದೆ.

ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರವು  ಮಾರ್ಚ್‌ನಲ್ಲಿ ಶೇ 4.28 ರಷ್ಟಿತ್ತು. ಏಪ್ರಿಲ್‌ನಲ್ಲಿ ಶೇ 4.58ಕ್ಕೆ ಏರಿಕೆಯಾಗಿದೆ‌ ಎಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಮಾಹಿತಿ ನೀಡಿದೆ.

2017ರ ಏಪ್ರಿಲ್‌ನಲ್ಲಿ ಇದು ಶೇ 2.99 ರಷ್ಟಿತ್ತು. ಅದಕ್ಕೆ ಹೋಲಿಸಿದರೆ ಈಗ ಅತಿ ಹೆಚ್ಚಿನ ಏರಿಕೆಯಾಗಿದೆ.

ಒರಟು ಧಾನ್ಯ, ಹಣ್ಣು, ಮಾಂಸ ಮತ್ತು ಮೀನಿನ ಬೆಲೆ ಹೆಚ್ಚಾಗಿರುವುದೇ ಚಿಲ್ಲರೆ ಹಣದುಬ್ಬರದ ಏರಿಕೆಗೆ ಕಾರಣ ಎಂದು ತಿಳಿಸಿದೆ.

ಸಗಟು ಹಣದುಬ್ಬರ: ಸಗಟು ಹಣದುಬ್ಬರವೂ ಏಪ್ರಿಲ್‌ನಲ್ಲಿ ನಾಲ್ಕು ತಿಂಗಳ ಗರಿಷ್ಠ ಮಟ್ಟವಾದ ಶೇ 3.18ಕ್ಕೆ ಏರಿಕೆಯಾಗಿದೆ.

ಪೆಟ್ರೋಲ್‌, ಡೀಸೆಲ್‌, ಹಣ್ಣು ಮತ್ತು ತರಕಾರಿಗಳು ತುಟ್ಟಿಯಾಗಿರುವುದರಿಂದ ಹಣದುಬ್ಬರ ದರದಲ್ಲಿ ಏರಿಕೆಯಾಗಿದೆ.

ಸಗಟು ದರ ಸೂಚ್ಯಂಕದ (ಡಬ್ಲ್ಯುಪಿಐ) ಆಧಾರದ ಮೇಲೆ ಲೆಕ್ಕಹಾಕುವ ಹಣದುಬ್ಬರವು ಮಾರ್ಚ್‌ನಲ್ಲಿ 2.47 ರಷ್ಟಿತ್ತು. 2017ರ ಏಪ್ರಿಲ್‌ನಲ್ಲಿ ಶೇ 3.85 ರಷ್ಟಿತ್ತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾಗುತ್ತಿದೆ. ಹೀಗಾಗಿ ವಿದ್ಯುತ್ ಮತ್ತು ಇಂಧನ ದರಗಳು ಕ್ರಮವಾಗಿ ಶೇ 7.85 ಮತ್ತು ಶೇ 4.70ಕ್ಕೆ ಏರಿಕೆಯಾಗಿವೆ. ಪೆಟ್ರೋಲ್‌ ಶೇ 9.45 ರಷ್ಟು ಡೀಸೆಲ್‌ ಶೇ 13.01 ರಷ್ಟು ತುಟ್ಟಿಯಾಗಿವೆ ಎಂದು ಸಚಿವಾಲಯ ತಿಳಿಸಿದೆ.

ಬಡ್ಡಿದರ ಇಳಿಕೆ?

ಚಿಲ್ಲರೆ ಹಣದುಬ್ಬರವನ್ನು ಪರಿಗಣಿಸಿ ಆರ್‌ಬಿಐ ಬಡ್ಡಿದರ ಪರಾಮರ್ಶೆ ನಡೆಸುತ್ತದೆ. ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರ ಮತ್ತೆ ಏರಿಕೆ ಹಾದಿ ಹಿಡಿದಿರುವುದರಿಂದ ಬಡ್ಡಿದರಗಳಲ್ಲಿ ತುಸು ಕಡಿತವಾಗುವ ನಿರೀಕ್ಷೆಯನ್ನು ಉದ್ಯಮ ವಲಯ ಹೊಂದಿದೆ.

**

ಜಿಎಸ್‌ಟಿ ಸಂಗ್ರಹದಲ್ಲಿ ಸ್ಥಿರತೆ ಕಂಡುಬಂದ ಬಳಿಕ ಸರ್ಕಾರ ಇಂಧನದ ಮೇಲಿನ ಎಕ್ಸೈಸ್‌ ಸುಂಕ ಕಡಿತದ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ
– ಅದಿತಿ ನಾಯರ್‌, ಐಸಿಆರ್‌ಎ ಆರ್ಥಿಕ ತಜ್ಞೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT