ಸ್ವಾತಂತ್ರ್ಯ ನಂತರ ಹಲವು ದಶಕಗಳ ಕಾಲ ಪಟ್ಟಣ ಹಾಗೂ ಸುತ್ತಲಿನ ಪ್ರದೇಶಗಳ ಮಕ್ಕಳಿಗೆ ಶಿಕ್ಷಣ ನೀಡಿದ ಏಕೈಕ ಪ್ರಾಥಮಿಕ ಶಾಲೆ ಇದಾಗಿದೆ. ನಿಜಾಮರು ತಂಗಲು ನಿರ್ಮಿಸಿದ್ದ ಪ್ರವಾಸಿ ಮಂದಿರವನ್ನು ನಂತರ ಶಾಲೆಯನ್ನಾಗಿ ಮಾರ್ಪಡಿಸಲಾಗಿದೆ. ಶಾಲೆಯ ಒಟ್ಟು 7 ಕೋಣೆಗಳು ಸಂಪೂರ್ಣ ಹಾಳಾಗಿದ್ದು, ಮಳೆ ಬಂದರೆ ಇಡೀ ಕಟ್ಟಡ ತೊಯ್ದು ತೊಪ್ಪೆಯಾಗುತ್ತದೆ. ಮಳೆ ಬಂದರೆ ಕೋಣೆಯೊಳಗೆ ಅರ್ಧ ಅಡಿಗೂ ಅಧಿಕ ನೀರು ನಿಲ್ಲುತ್ತಿದ್ದು, ಶಾಲೆಗೆ ರಜೆ ನೀಡಲಾಗುತ್ತದೆ. ಮಳೆ ನಿಂತ ಬಳಿಕವೂ ತಿಂಗಳುಗಟ್ಟಲೆ ಹನಿ ನೀರು ತೊಟ್ಟಿಕ್ಕಿ ಮಕ್ಕಳ ಅಭ್ಯಾಸಕ್ಕೆ ಇಲ್ಲಿ ತೀವ್ರ ಅಡಚಣೆ ಉಂಟಾಗುತ್ತದೆ.
1920ರಲ್ಲಿ ಈ ಕಟ್ಟಡ ನಿರ್ಮಿಸಲಾಗಿದ್ದು ನಂತರ ಇದನ್ನು ಶಾಲೆಗೆ ಬಳಸಿಕೊಳ್ಳಲಾಗುತ್ತಿದೆ. ನಿಜಾಮರ ಕಾಲದಲ್ಲಿ ಶಾಲೆ ಆರಂಭಗೊಂಡಿದೆ. ಉರ್ದು ಮಾಧ್ಯಮದಲ್ಲಿ ಆರಂಭಗೊಂಡ ಶಾಲೆ ನಂತರ ಕನ್ನಡ ಮಾಧ್ಯಮವಾಯಿತು ಎನ್ನುತ್ತಾರೆ ಹಿರಿಯರಾದ ಟೋಪಣ್ಣ ಕೋಮಟೆ.