ಅಫಜಲಪುರ: ತಾಲ್ಲೂಕಿನ ಮಾಶಾಳ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೃಷಿ ಹೊಂಡ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ.
ಮಾಶಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಈಗಾಗಲೇ ರೈತರ ಜಮೀನುಗಳಲ್ಲಿ ಬದು ನಿರ್ಮಾಣ ಹಾಗೂ ನೀರಿನ ತೊಟ್ಟಿ, ದನದ ಕೊಟ್ಟಿಗೆಗಳನ್ನು ನಿರ್ಮಿಸಲಾಗಿದೆ.
ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 10 ವರ್ಷಗಳಲ್ಲಿ ಸಾವಿರಕ್ಕೂ ಹೆಚ್ಚು ಕೃಷಿ ಹೊಂಡಗಳನ್ನು ಮತ್ತು 3 – 4 ಕೆರೆಗಳನ್ನು ನಿರ್ಮಿಸಲಾಗಿದೆ. ಕೃಷಿ ಇಲಾಖೆಯಿಂದಲೂ ಪಂಚಾಯಿತಿ ವ್ಯಾಪ್ತಿಯಲ್ಲಿ 500ಕ್ಕೂ ಹೆಚ್ಚು ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ.
‘ಮಾಶಾಳ ಗ್ರಾಮ ಪಂಚಾಯಿತಿಯಲ್ಲಿ 1775 ಜಾಬ್ ಕಾರ್ಡ್ ಹೊಂದಿದ ಕೂಲಿ ಕಾರ್ಮಿಕರಿದ್ದು, ಹಂತ ಹಂತವಾಗಿ ಅವರೆಲ್ಲರಿಗೂ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ನೀಡಲಾಗುತ್ತದೆ. ಈಗಾಗಲೇ ನೂರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮೇಶ ಪಾಟೀಲ ಮಾಹಿತಿ ನೀಡಿದರು.
‘ಕೃಷಿ ಹೊಂಡಗಳನ್ನು ವೈಜ್ಞಾನಿಕ ರೀತಿಯಲ್ಲಿ ತೋಡಲಾಗುತ್ತಿದೆ. ಮಳೆ ಬಂದರೆ ಗ್ರಾಮಕ್ಕೆ ಅನುಕೂಲ ಆಗಲಿದೆ. ಇನ್ನೊಂದು ಕಡೆ ಕೂಲಿ ಕಾರ್ಮಿಕರಿಗೆ ಅನುಕೂಲ ಆಗುತ್ತಿದೆ. ಪ್ರತಿಯೊಬ್ಬರಿಗೂ ದಿನಕ್ಕೆ ₹ 285 ಕೂಲಿ ನೀಡಲಾಗುತ್ತಿದೆ. ವಾರಕ್ಕೊಮ್ಮೆ ಕೂಲಿಕಾರರ ಖಾತೆಗೆ ಕೂಲಿ ಹಣವನ್ನು ಜಮಾ ಮಾಡಲಾಗುತ್ತಿದೆ’ ಎಂದು ತಿಳಿಸಿದರು.
ಅನುಕೂಲ ಆಗಿದೆ: ‘ನಮಗೆ ಎಲ್ಲಿಯೂ ಕೆಲಸ ಇರಲಿಲ್ಲ. ಈಗ ನರೇಗಾದಡಿ ಕೆಲಸದಿಂದ ನಮಗೆ ಅನುಕೂಲ ಆಗಿದೆ’ ಎಂದು ಸರುಬಾಯಿ ಯಲ್ಲಾಲಿಂಗ ಅವಟಗಿ, ಈರಮ್ಮ ಬಾಬು ನಾಶಿ, ಸುರೇಖಾ ಶಿವು ಹಿಪ್ಪರಗಿ, ಕಾವೇರಿ ಆನಂದ ಇಟಗಾರ ಅವರು ಹೇಳಿದರು.