ಶಿರಹಟ್ಟಿ (ವೆಂಕೋಬರಾಯರ ವೇದಿಕೆ): ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಮೂಲ ಸೌಲಭ್ಯ ಹಾಗೂ ಉತ್ತಮ ಶಿಕ್ಷಕರನ್ನು ನೀಡಲಾಗುತ್ತಿದೆ. ಆದರು ಕೂಡ ಖಾಸಗಿ ಶಿಕ್ಷಣ ಸಂಸ್ಥೆಗಳ ಸರ್ಕಾರಿ ಶಾಲೆಗಳು ಪೈಪೋಟಿ ನೀಡುತ್ತಿಲ್ಲ. ಇದಕ್ಕೆ ಶಿಕ್ಷಕರಲ್ಲಿ ಇಚ್ಛಾಶಕ್ತಿಯ ಕೊರತೆಯೇ ಪ್ರಮುಖ ಕಾರಣವಾಗಿದೆ’ ಎಂದು ತಾಲ್ಲೂಕು ಸಮ್ಮೇಳನದ ಸರ್ವಾಧ್ಯಕ್ಷ ಸಿ.ಜಿ.ಹಿರೇಮಠ ಹೇಳಿದರು.
ತಾಲ್ಲೂಕಿನ ಬನ್ನಿಕೊಪ್ಪ ಗ್ರಾಮದ ಅನ್ನದಾನೀಶ್ವರ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಲಾಭದ ಉದ್ದೇಶ ಹಾಗೂ ರಾಜಕೀಯ ಪ್ರತಿಷ್ಠೆಗಳಿಗೆ ಶಿಕ್ಷಣ ಸಂಸ್ಥೆ ತೆರೆಯುವ ಪ್ರವೃತ್ತಿ ಎಲ್ಲಡೆ ಹೆಚ್ಚಾಗಿದೆ. ಶಿಕ್ಷಣದ ಮೂಲ ಉದ್ದೇಶ ಮರೆಯಾಗುತ್ತಿದೆ. ಸರ್ಕಾರ ಸರ್ಕಾರಿ ಶಾಲೆಗಳ ಹಾಗೂ ಕನ್ನಡ ಭಾಷೆಯ ಉಳಿವಿಗಾಗಿ ಕಠಿಣ ನಿರ್ಧಾರ ಕೈಗೊಳ್ಳಬೇಕಿದೆ’ ಎಂದು ಅಭಿಪ್ರಾಯಪಟ್ಟರು.
ಫಕ್ಕೀರಸಿದ್ಧರಾಮ ಸ್ವಾಮೀಜಿ ಮಾತನಾಡಿ, ‘ಮೌಲ್ಯಯುತ ಶಿಕ್ಷಣ ನೀಡುವಲ್ಲಿ ಮಠಗಳ ಪಾತ್ರ ಅತ್ಯಂತ ಮಹತ್ವವಾಗಿದ್ದು, ಧರ್ಮ ರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸಲು ನಿರಂತರವಾಗಿ ಶ್ರಮಿಸುತ್ತಿವೆ. ಸಮಾಜದ ಸ್ವಾಸ್ಥ್ಯ ಕಾಪಾಡಲು ಮತ್ತು ಮನುಷ್ಯನಿಗೆ ಆಧ್ಯಾತ್ಮಿಕದ ಅನುಭೂತಿ ನೀಡುವಲ್ಲಿ ಮಠಗಳ ಪಾತ್ರ ಅನನ್ಯವಾಗಿದೆ’ ಎಂದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ, ಕೆ.ಎ.ಬಳಿಗೇರ, ಡಾ.ಶಿವಾನಂದ ಶಿವಸಿಂಪಿ, ಆರ್.ಆರ್.ಗಡ್ಡದೇವರಮಠ, ಬಾಬಣ್ಣ ಕಲಾಲ, ವಿರೂಪಾಕ್ಷಪ್ಪ ಮಾಗಡಿ, ಸಕ್ರಪ್ಪ ಹೊಸೂರ, ಅಜೀತ ಪಿಡ್ಡಿ, ಮಹಾವೀರ ಮಂಟಗಣಿ, ವಿರೂಪಾಕ್ಷ ಮಾಗಡಿ, ವಸಂತ ಜಗ್ಗಲರ, ಮಲ್ಲೆಶ ಸಜ್ಜನ, ವೀರಣ್ಣ ಪುರದ, ಪರಮೇಶಪ್ಪ ಈಟಿ, ಪರಶುರಾಮ ಕಲಾಲ, ಈರಣ್ಣ ಪುರದ, ಪಕ್ಕಣ್ಣ ಹಂಸಿ, ಪಕ್ಕಣ್ಣ ಕುಸ್ತಿ, ಮಾಬುಸಾಬ್ ನದಾಫ್, ಮಾಬುಸಾಬ್ ಹಾರೋಗೇರಿ, ಬಿ.ಎಂ.ಚೋಟಗಲ್ಲ, ಪರಪ್ಪ ಹೊನಗಣ್ಣವರ, ಪರಸಪ್ಪ ಮಾಗಡಿ, ಜಂಬಯ್ಯ ಹಿರೇಮಠ, ಕೊಟ್ರಪ್ಪ ಹಮ್ಮಗಿ, ಬಸನಗೌಡ ಮಾಗಡಿ ಇದ್ದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಕೆ.ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಎಲ್.ಮುಳಗುಂದ, ವಿ.ಆರ್.ಅರ್ಕಸಾಲಿ ಸ್ವಾಗತಿಸಿದರು. ಮಲ್ಲಿಕಾರ್ಜುನ ರೆಡ್ಡಿ, ಈಶ್ವರ ಮಡ್ಲೇರಿ ನಿರೂಪಿಸಿದರು. ಎಂ.ಆರ್.ಮೇಗಲಮನಿ, ಎಂ.ಎ.ಮಕಾಂದರ ವಂದಿಸಿದರು.
ಸಮ್ಮೇಳನದಲ್ಲಿ ತಗೆದುಕೊಂಡ ನಿರ್ಣಯ
ಮಹದಾಯಿ ಯೋಜನೆ ಜಾರಿಗಾಗಿ ಒತ್ತಾಯಿಸಲಾಗುವುದು. ಸಸ್ಯಕಾಶಿ ಕಪ್ಪತ್ತಗುಡ್ಡದಲ್ಲಿ ಆಯುರ್ವೇದ ವಿಶ್ವವಿದ್ಯಾಲಯ ಸ್ಥಾಪನೆ ಮಾಡಬೇಕು. ಶಿರಹಟ್ಟಿ ತಾಲ್ಲೂಕಿಗೆ ಸಿಂಗಟಾಲೂರ ಏತ ನೀರಾವರಿಯಿಂದ ಈಗಾಗಲೇ ಸ್ವಲ್ಪ ಭಾಗ ನೀರಾವರಿಗೆ ಒಳಪಡುತ್ತಿದೆ. ಇದನ್ನು ತಾಲ್ಲೂಕಿನಾದ್ಯಂತ ವಿಸ್ತರಿಸಬೇಕು ಎಂಬ ನಿರ್ಣಯಗಳನ್ನು ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.