ಕಮಲಾಪುರ (ಕಲಬುರ್ಗಿ ಜಿಲ್ಲೆ): ಶ್ರೀಗಂಧದ ಮರ ಕಳವು ಪ್ರಕರಣದ ಆರೋಪಿಯೊಬ್ಬನನ್ನು 20 ವರ್ಷದ ಬಳಿಕ ಕಮಲಾಪುರ ಪೊಲೀಸರು ಬಂಧಿಸಿದ್ದಾರೆ.
ತೆಲಂಗಾಣದ ಜಹೀರಾಬಾದ್ ಬಗಲಿ ತಾಂಡಾದ ಕಾಶಿನಾಥ ಬಿಕ್ಕು ಜಾಧವ ಬಂಧಿತ. 2001ರಲ್ಲಿ ತಾಲ್ಲೂಕಿನ ಅಂತಪನಾಳ ಸೀಮೆಯಲ್ಲಿ ಶ್ರೀಗಂಧದ ಮರ ಕಳವು ಕುರಿತು ಕಮಲಾಪುರ ಠಾಣೆಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ 6 ಮಂದಿ ಭಾಗಿಯಾಗಿದ್ದರು. ಎಲ್ಲರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕ ಒಪ್ಪಿಸಲಾಗಿತ್ತು. ಜಾಮೀನು ಮೇಲೆ ತೆರಳಿದ ಇವರಲ್ಲಿ ನಾಲ್ವರು ನ್ಯಾಯಾಲಯಕ್ಕೆ ಹಾಜರಾಗಿ 2010ರಲ್ಲಿ ಖುಲಾಸೆಯಾಗಿದ್ದಾರೆ.
ಆದರೆ, ಕಾಶಿನಾಥ ಬಿಕ್ಕು ಜಾಧವ ಹಾಗೂ ಅವರ ಸಹೋದರ ಗಣಪತಿ ಬಿಕ್ಕು ಜಾಧವ ಪರಾರಿಯಾಗಿದ್ದರು. ಈಗ ಕಾಶಿನಾಥ ಅವರನ್ನು ಬಂಧಿಸಲಾಗಿದೆ.ಗಣಪತಿ ಬಿಕ್ಕು ಜಾಧವ 2015ರಲ್ಲಿ ಮೃತಪಟ್ಟಿದ್ದಾರೆ. ಗಣಪತಿ ಅವರ ಮರಣ ಪ್ರಮಾಣ ಪತ್ರ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.