ಜೇವರ್ಗಿ: ತಾಲ್ಲೂಕಿನ ಮಲ್ಲಾಬಾದ ಏತ ನೀರಾವರಿ ಯೋಜನೆಯ 80ರಿಂದ 89ವರೆಗಿನ ವಿತರಣಾ ಕಾಲುವೆಗಳ ಕಾಮಗಾರಿ ಕಳಪೆಯಾಗಿದೆ. ಈ ಕುರಿತು ತನಿಖೆ ನಡೆಸಬೇಕು ಎಂದು ಜಯ ಕರ್ನಾಟಕ ಸಂಘಟನೆ ತಾಲ್ಲೂಕು ಘಟಕದ ವತಿಯಿಂದ ಕೃಷ್ಣಾ ಭಾಗ್ಯ ಜಲ ನಿಗಮದ ಚಿಗರಳ್ಳಿಯ ಜೇವರ್ಗಿ ಶಾಖಾ ಕಾಲುವೆ ವಿಭಾಗ–3ರ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಪುತ್ರ ಕಾಳಗಿ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
80ರಿಂದ 89ರವರೆಗಿನ ವಿತರಣಾ ಕಾಲುವೆ ವ್ಯಾಪ್ತಿಯಲ್ಲಿ ಬರುವ ಮುತ್ತಕೋಡ, ಕಾಸರಭೋಸಗಾ, ನೀರಲಕೋಡ, ಹಂಚಿನಾಳ, ಶಕಾಪುರ (ಎಸ್.ಎ) ಗ್ರಾಮಗಳ ರೈತರ ಜಮೀನಿಗೆ ನೀರು ಹರಿಸುವ ವಿತರಣಾ ಕಾಲುವೆಗಳನ್ನು ಗುಣಮಟ್ಟದಿಂದ ನಿರ್ಮಿಸಬೇಕು. ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಮರ್ಪಕವಾಗಿ ನೀರು ಹರಿಸಬೇಕು ಎಂದು ಸಂಘಟನೆ ಪದಾಧಿಕಾರಿಗಳು ಆಗ್ರಹಿಸಿದರು.
ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಸುಧೀಂದ್ರ ಇಜೇರಿ, ಚಂದ್ರು ಮಲ್ಲಾಬಾದ, ಲಕ್ಷ್ಮಣ ಹಂಚಿನಾಳ, ಸತೀಶ ಜಹಾಗೀರದಾರ, ಜಗದೀಶ ಅರಳಗುಂಡಗಿ, ಮಹಾಂತೇಶ ಹಾದಿಮನಿ, ಭೀಮಾಶಂಕರ ಜನಿವಾರ, ಈರಣ್ಣ ಹೊಸಮನಿ, ವಿಕ್ರಮ ಬೇಲೂರ, ಪ್ರಭುರೆಡ್ಡಿ ಇದ್ದರು.