ಕಲಬುರಗಿ: ಶಿವಶರಣ ಹರಳಯ್ಯ ಸಮಗಾರ (ಮಚಗಾರ) ಸಮಾಜದ ಜಿಲ್ಲಾ ಘಟಕದಿಂದ ಇದೇ ಸೆ 18ರಂದು ಬೆಳಿಗ್ಗೆ 11ಕ್ಕೆ ನಗರದ ರಾಮ ಮಂದಿರ ಪ್ರದೇಶದ ಮಾನಕರ್ ಲೇಔಟ್ನಲ್ಲಿರುವ ಸಮಾಜದ ಭವನದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಮಕ್ಕಳಿಗೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ಆಯೋಜಿಸಿದೆ ಎಂದು ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಕಾಶಿರಾಯ ನಂದೂರಕರ್ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾರಂಭವನ್ನು ಕೆಕೆಆರ್ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಉದ್ಘಾಟಿಸುವರು. ಶಾಸಕ ಬಸವರಾಜ ಮತ್ತಿಮಡು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಮಹಾನಗರ ಪಾಲಿಕೆ ಸದಸ್ಯೆ ಅರ್ಚನಾ ಬಿರಾಳ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಮಲ್ಲಿಕಾರ್ಜುನ ಜೇರಟಗಿ, ಬೆಂಗಳೂರು ಡಿಆರ್ಡಿಒ ಹಿರಿಯ ವಿಜ್ಞಾನಿ ಡಿ.ಜಿ.ರಾವ್ ಅತಿಥಿಗಳಾಗಿ ಪಾಲ್ಗೊಳ್ಳುವರು.
ಕಳೆದ ಎಂಟು ವರ್ಷದಿಂದ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಿಸಲು ಈ ಕಾರ್ಯಕ್ರಮ ನಿರಂತರವಾಗಿ ಆಯೋಜಿಸುತ್ತಾ ಬರಲಾಗಿದೆ. ಈ ವರ್ಷ ಸಹ ಹೆಚ್ಚಿನ ಅಂಕ ಪಡೆದ ಕ್ರಮವಾಗಿ 50 ಮತ್ತು 17 ವಿದ್ಯಾರ್ಥಿಗಳಿಗೆ ಗಣ್ಯರಿಂದ ನೆನಪಿನ ಕಾಣಿಕೆ, ನಗದು ಬಹುಮಾನ ನೀಡಿ ಸನ್ಮಾನಿಸಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದ ಸಾಧಕರನ್ನು ಸಹ ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಪದಾಧಿಕಾರಿಗಳಾದ ಶಿವಶರಣಪ್ಪ ಜಿ. ದೊಡ್ಡಮನಿ, ಶಿವರಾಯ ಕಟ್ಟಿಮನಿ, ಸಿದ್ದಣ್ಣ ಭಾವಿಮನಿ, ವೀರಭದ್ರಪ್ಪ ಹೆಬ್ಬಾಳ, ಪುಂಡಲೀಕ ಎಸ್. ಟೆಂಗಳಿ, ಕಾಶಿನಾಥ ದಿವಂಟಗಿ ಇದ್ದರು.