ಕಲಬುರ್ಗಿ: ‘ನಗರದಲ್ಲಿ ಕಾಂಗ್ರೆಸ್ ಈಚೆಗೆ ಆಯೋಜಿಸಿದ್ದ ಬಂಜಾರ ಸಮಾಜದ ಸಮಾವೇಶದಲ್ಲಿ ಲತಾ ರವಿ ರಾಠೋಡ ಅವರು ಸೆರಗೊಡ್ಡಿ ಖರ್ಗೆ ಪರ ಮತಯಾಚಿಸಿರುವುದು ಖಂಡನೀಯ’ ಎಂದು ಬಂಜಾರ ಸಮಾಜದ ಮುಖಂಡ ವಿಠ್ಠಲ ಜಾಧವ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಂಜಾರ ಸಮಾಜದ ಅಭ್ಯರ್ಥಿ ಪರವಾಗಿ ಸೆರಗೊಡ್ಡಿ ಮತಯಾಚಿಸಿದ್ದರೆ ಸ್ವಾಗತಿಸುತ್ತಿದ್ದೆವು. ಆದರೆ, ಖರ್ಗೆ ಪರ ಮತಯಾಚಿಸಿರುವುದು ಸನಯದಾಯಕ್ಕೆ ಅಗೌರವ ತೋರಿದಂತಾಗಿದೆ. ಅಷ್ಟೇ ಅಲ್ಲ, ಇದು ಸಮಾಜದ ಜನರ ದಿಕ್ಕು ತಪ್ಪಿಸುವ ಕೆಲಸವಾಗಿದೆ’ ಎಂದು ದೂರಿದರು.
‘ಇಡೀ ದೇಶದಲ್ಲಿ ಕಲಬುರ್ಗಿ ಮತಕ್ಷೇತ್ರದಲ್ಲಿ ಮಾತ್ರ ಬಂಜಾರ ಸಮಾಜದ ಡಾ.ಉಮೇಶ ಜಾಧವ ಅವರಿಗೆ ಪಕ್ಷ ಟಿಕೆಟ್ ಕೊಟ್ಟಿದೆ. ಹೀಗಿರುವಾಗ ಅವರನ್ನು ಗೆಲ್ಲಿಸುವುದು ನಮ್ಮ ಆದ್ಯತೆಯಾಗಬೇಕು. ಗುಲಬರ್ಗಾ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಗೆ ಉತ್ತಮ ವಾತಾವರಣವಿದೆ. ಬಂಜಾರ ಮತದಾರರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಹೀಗಾಗಿ ಜಾಧವ ಬಹುಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಪ್ರಿಯಾಂಕ್ ಖರ್ಗೆಗೆ ಪ್ರಬುದ್ಧತೆ ಇಲ್ಲ. ಮುಂಬಯಿನಲ್ಲಿರುವ ಮತದಾರರನ್ನು ಕರೆತರಲು ಬಿಜೆಪಿ ವಾಹನದ ವ್ಯವಸ್ಥೆ ಮಾಡಿಲ್ಲ. ಅಲ್ಲಿರುವ ಮತದಾರರು ಒಂದುಗೂಡಿಕೊಂಡು, ಅವರೇ ವಾಹನ ಮಾಡಿಕೊಂಡು ಬರುತ್ತಿದ್ದಾರೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕರ್ನಾಟಕ ಪ್ರದೇಶ ಬಂಜಾರ ಸೇವಾ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಬಿ.ಸಿದ್ದಾನಾಯಕ ಮಾತನಾಡಿ, ‘ಲೋಕಸಭೆಯಲ್ಲಿ ನಮ್ಮ ಸಮಾಜದ ಧ್ವನಿ ಇಲ್ಲ. ಆದ್ದರಿಂದ ಡಾ.ಉಮೇಶ ಜಾಧವ ಅವರನ್ನು ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.
ಯುವ ಮುಖಂಡ ಕೃಷ್ಣಾ ನಾಯಕ ಮಾತನಾಡಿ, ‘ಖರ್ಗೆ ಅವರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ. ಅವರು ಕುಟುಂಬ ರಾಜಕಾರಣದಲ್ಲಿ ನಿರತರಾಗಿದ್ದಾರೆ. ಆದ್ದರಿಂದ ಈ ಬಾರಿ ಅವರನ್ನು ಸೋಲಿಸಬೇಕು’ ಎಂದರು.
ಮುಖಂಡರಾದ ಶಂಕರ ಚವಾಣ್, ಸುರೇಶ ನಾಯಕ, ಬಾಬು ಪವಾರ ಇದ್ದರು.