ಆಳಂದ: ತಾಲ್ಲೂಕಿನ ಕಾಮನಳ್ಳಿ ಗ್ರಾಮದಲ್ಲಿ ಗ್ರಾಮೀಣ ವಿಕಾಸ ಯೋಜನೆಯಡಿ ಕೈಗೊಂಡ ರಸ್ತೆ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿ ಸಹಾಯಕ ಕಾರ್ಯನಿರ್ವಹಾಕ ಎಂಜಿನಿಯರ್ ಕಚೇರಿ ಎದುರು ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ತಾಲ್ಲೂಕು ಅಧ್ಯಕ್ಷ ಬಸವರಾಜ ಕೊರಳ್ಳಿ ಮಾತನಾಡಿ, ‘₹50 ಲಕ್ಷ ವೆಚ್ಚದ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ. ಇದಕ್ಕೆ ಕಾರಣರಾದ ಸಹಾಯಕ ಎಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿನಾಥ ಸಾರವಾಡ ಮಾತನಾಡಿ, ‘ತಾಲ್ಲೂಕಿನ ವಿವಿಧೆಡೆ ನಕಲಿ ದಾಖಲೆ ಸೃಷ್ಟಿಸಿ ಕಳಪೆ ಕಾಮಗಾರಿ ಮೇಲೆ ಅನುದಾನ ಎತ್ತಿ ಹಾಕಲಾಗುತ್ತಿದೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು’ ಎಂದು ಅವರು ಆಗ್ರಹಿಸಿದರು.
ತಾಲ್ಲೂಕು ಪಂಚಾಯಿತಿ ಅಧಿಕಾರಿ ಸಂತೋಷ ಮನವಿ ಪತ್ರ ಸ್ವೀಕರಿಸಿದರು. ಮುಖಂಡರಾದ ಸುರೇಶ ನೆಲ್ಲೂರೆ, ಗುಂಡೆರಾವ ಮಂಟಗಿ, ಸಂಗಣ್ಣಗೌಡ ಪಾಟೀಲ, ಲಿಂಗರಾಜ ಪಾಟೀಲ, ಸಿದ್ದುಗೌಡ ಕಿಣಿಗಿ, ನಾಗರಾಜ ಘೋಡಕೆ, ಬಸವರಾಜ ಕುಂಬಾರ, ಅಭಿಷೇಕ ಹಿರೇಮಠ, ಅಜಿತ ಪಾಟೀಲ, ಶಿವಲಿಂಗಪ್ಪ ಪಟ್ಟಣಶೆಟ್ಟಿ, ಅಮಿತ್ ಪಾಟೀಲ ಇದ್ದರು.