ಕಲಬುರಗಿ: ಅಗ್ನಿಪಥ ಯೋಜನೆ ರದ್ದತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್ವಾದಿ) ಮುಖಂಡರು ಮತ್ತು ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಸಿಪಿಐ (ಎಂ) ಜಿಲ್ಲಾ ಘಟಕದ ಕಾರ್ಯದರ್ಶಿ ಕೆ. ನೀಲಾ ಮಾತನಾಡಿ, ‘ಪರಿಷ್ಕೃತ ಪಠ್ಯ ಪುಸ್ತಕ ರದ್ದುಪಡಿಸಬೇಕು. ದಿಕ್ಕುತಪ್ಪಿಸುವ ತಂತ್ರವಾದತಿದ್ದೋಲೆಯನ್ನೂ ಕೈಬಿಡಬೇಕು’ ಎಂದರು.
‘ಅಗ್ನಿಪಥ ಯೋಜನೆರಾಷ್ಟ್ರೀಯ ಹಿತಾಸಕ್ತಿಗಳಿಗೆ ಅಪಚಾರ ಎಸಗುತ್ತದೆ. ನಾಲ್ಕು ವರ್ಷಗಳಿಗೆ ಒಪ್ಪಂದದ ಮೇರೆಗೆ ಸೈನಿಕರನ್ನು ನೇಮಿಸಿಕೊಂಡು ವೃತ್ತಿಪರ ಸಶಸ್ತ್ರ ಪಡೆಗಳನ್ನು ಕಟ್ಟಲು ಆಗುವುದಿಲ್ಲ. ಇದರಿಂದ ಸೈನ್ಯದ ಗುಣಮಟ್ಟ ಮತ್ತು ದಕ್ಷತೆ ಕುಸಿಯುತ್ತದೆ. ಸೇವೆಯ ಬಳಿಕ ಅವರು ಖಾಸಗಿ ಸಶಸ್ತ್ರ ಪಡೆಗಳಿಗೆ ಸೇವೆ ಸಲ್ಲಿಸುವ ಅಪಾಯಕಾರಿ ಪರಿಸ್ಥಿತಿ ಸೃಷ್ಟಿಸುತ್ತದೆ. ಈಗಾಗಲೇ ಒತ್ತಡದಲ್ಲಿರುವ ಸಾಮಾಜಿಕ ಹಂದರಕ್ಕೆ ಅನಾಹುತಕಾರಿ ಪರಿಣಾಮಗಳನ್ನು ಉಂಟು ಮಾಡುವ ಸಾಧ್ಯತೆ ಇದೆ’ ಎಂದರು.
‘ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್, ನಿವೃತ್ತ ಡಿಜಿಪಿ ಶ್ರೀಕುಮಾರ್ ಹಾಗೂ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜ಼ುಬೈರ್ ಅವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಇದು ಖಂಡನೀಯ’ಎಂದರು.
‘ಕೇಂದ್ರ ಸರ್ಕಾರ ಪ್ರಜಾಪ್ರಭುತ್ವದ ಎಲ್ಲ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ನಾಶಗೊಳಿಸಲು ಯತ್ನಿಸುತ್ತಿದೆ. ಸೇಡಿನ ಕ್ರಮವಾಗಿ ಮತ್ತು ಹೋರಾಟಗಳನ್ನು ಹತ್ತಿಕ್ಕುವ ಸರ್ವಾಧಿಕಾರಿ ಧೋರಣೆಯಾಗಿ ಅವರನ್ನು ಬಂಧಿಸಿ ಜೈಲಿನಲ್ಲಿ ಇರಿಸಿದೆ. ಇದು ಹೀಗೆ ಬಿಟ್ಟರೇ ಅನೇಕ ಬಂಧಿತರ ಪಟ್ಟಿಯು ಬೆಳೆಯುತ್ತಿದೆ. ಇದು ದೇಶದ ಒಕ್ಕೂಟ ವ್ಯವಸ್ಥೆಯನ್ನು ನಾಶ ಮಾಡುವ ಷಡ್ಯಂತ್ರವಾಗಿದೆ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ(ಎಂ)ನ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಮಂಡಳಿ ಸದಸ್ಯರಾಧ ಕಾ.ಎಂ.ಬಿ.ಸಜ್ಜನ್, ಕಾ.ಭೀಮಶೆಟ್ಟಿ ಯಂಪಳ್ಳಿ, ಕಾ.ಶ್ರೀಮಂತ ಬಿರಾದಾರ, ಕಾ.ಶರಣಬಸಪ್ಪ ಮಮಶೆಟ್ಟಿ, ಗೌರಮ್ಮ ಪಾಟಿಲ, ಜಾವೇದ್ ಹುಸೇನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.