ವಾಡಿ: ಹೈದರಾಬಾದ್ನಲ್ಲಿ ಈಚೆಗೆ ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ನಂತರ ಸುಟ್ಟು ಹಾಕಿದವರಿಗೆ ಉಗ್ರ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳು ಸೋಮವಾರ ಸಂಜೆ ಇಲ್ಲಿ 'ಕ್ಯಾಂಡಲ್ ಮಾರ್ಚ್' ನಡೆಸಿದವು.
ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೇಜೇಷನ್ (ಎಐಡಿಎಸ್ಓ), ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೇಜೇಷನ್(ಎಐಡಿವೈಓ) ಹಾಗೂ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್) ಜಂಟಿಯಾಗಿ ಮೌಲಾನಾ ಅಬುಲ್ ಕಲಾಂ ಆಜಾದ್ ಚೌಕ್ ವೃತ್ತದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ನೂರಾರು ಜನ ಭಾಗವಹಿಸಿದ್ದರು.
ಎಐಡಿವೈಓ ಸಂಘಟನೆಯ ಸ್ಥಳೀಯ ಅಧ್ಯಕ್ಷ ಮಲ್ಲಿನಾಥ ಹುಂಡೆಕಲ್, ಎಂಎಸ್ಎಸ್ ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಗೌರಮ್ಮ ಕೆ. ಮಾತನಾಡಿ, ‘ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.
‘ದೇಶದಲ್ಲಿ ಬಾಲಕಿಯರು, ಮಹಿಳೆಯರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳಿಗೆ ಪ್ರಮುಖವಾಗಿ ಅಶ್ಲೀಲ ಅಂತರ್ಜಾಲ ತಾಣಗಳು, ಸಿನಿಮಾ ಸಾಹಿತ್ಯ ಪ್ರಮುಖ ಕಾರಣ. ಆದ್ದರಿಂದ ಸರ್ಕಾರ ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿನ ಅಶ್ಲೀಲತೆಯನ್ನು ಸಂಪೂರ್ಣವಾಗಿ ತೆಗೆದು ಹಾಕಬೇಕು’ ಎಂದು ಒತ್ತಾಯಿಸಿದರು.
ಸಂಘಟನೆಗಳ ಮುಖಂಡರಾದ ಶರಣು ಹೆರೂರು, ಶಿವಕುಮಾರ ಆಂದೋಲ, ವೆಂಕಟೇಶ ದೇವದುರ್ಗ, ದತ್ತು ಹುಡೇಕರ, ಜಯಶ್ರೀ ಎಂ.ಕೆ, ಗೋವಿಂದ ಯಳವಾರ, ಚೇತನ, ಮಹಿಬೂಬ ಇದ್ದರು.