ಚಿಂಚೋಳಿ: ಇಲ್ಲಿನ ತಾ.ಪಂ. ಕಚೇರಿ ಎದುರು ಸಮತಾ ಸೈನಿಕ ದಳದ ಕಾರ್ಯಕರ್ತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಧರಣಿ ನಡೆಸಿದರು.
ತಾಲ್ಲೂಕಿನ ದೇಗಲಮಡಿ ಹಾಗೂ ಗಡಿಕೇಶ್ವಾರ ಗ್ರಾ.ಪಂ.ಗಳಲ್ಲಿ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಅವ್ಯವಹಾರ ನಡೆಸಲಾಗಿದೆ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಒತ್ತಾಯಿಸಿದರು.
2021ರಲ್ಲೂ ದೂರು ನೀಡಿ ತನಿಖೆಗೆ ಒತ್ತಾಯಿಸಲಾಗಿತ್ತು, ಆದರೆ ಈವರೆಗೂ ಯಾವುದೇ ತನಿಖೆ ನಡೆಸಿಲ್ಲ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿಲ್ಲ. 15 ದಿನಗಳ ಒಳಗಾಗಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸದೇ ಹೋದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ತಾ.ಪಂ. ಕಾರ್ಯನಿರ್ವಹಣಾ ಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ದಳದ ತಾಲ್ಲೂಕು ಘಟಕದ ಗೌರವ ಅಧ್ಯಕ್ಷ ವಿಲಾಸಕುಮಾರ ಘಾಳಾ, ತಾಲ್ಲೂಕು ಅಧ್ಯಕ್ಷ ಮಹೇಶಕುಮಾರ ಕೆಳಕೇರಿ, ಆರ್ಪಿಐ ತಾಲ್ಲೂಕು ಅಧ್ಯಕ್ಷ ಸುರೇಶ ಬಳಂಕರ್, ಮಸ್ತಾನ ಇಟಲಿ, ನಾಗಾರ್ಜುನ ಕಟ್ಟಿ, ಸತೀಶ ಹೊಸಳ್ಳಿ, ಶಶಿಕುಮಾರ ಮೇತ್ರಿ, ಚಂದ್ರಕಾಂತ ಕಟ್ಟಿಮನಿ ಇದ್ದರು.
‘ದೇಗಲಮಡಿ ಗ್ರಾ.ಪಂ.ಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಈ ಕುರಿತು ಮೇಲಧಿಕಾರಿಗಳು ತನಿಖೆ ನಡೆಸಲು ತಮ್ಮ ಸಂಪೂರ್ಣ ಸಹಮತವಿದೆ. ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದೇವೆ. ತನಿಖೆಗೆ ನಮ್ಮ ಅಭ್ಯಂತರವಿಲ್ಲ’ ಎಂದು ಪಿಡಿಒ ಜ್ಯೋತಿ ಅನಿಲಕುಮಾರ ಸ್ಪಷ್ಟಪಡಿಸಿದ್ದಾರೆ.