ಕಲಬುರ್ಗಿ: ಸರ್ಕಾರಿ ಸೇವೆಗಳನ್ನು ನೀಡಲು ನಗರದಲ್ಲಿ ಒಂದೇ ನೆಮ್ಮದಿ ಕೇಂದ್ರವಿದ್ದು, ತೊಂದರೆಯಾಗಿದೆ. ಸರಿಯಾದ ಸಮಯಕ್ಕೆ ದಾಖಲೆ ಸಿಗುವಂತೆ ಮಾಡಲು ಹೆಚ್ಚು ಕೇಂದ್ರಗಳನ್ನು ತೆರೆಯಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡ ಪ್ರತಿಭಟನಾಕಾರರು, ಬೇಡಿಕೆಗಳ ಬಗ್ಗೆ ಘೋಷಣೆ ಮೊಳಗಿಸಿದರು.
7 ಲಕ್ಷ ಜನರಿರುವ ಈ ನಗರದಲ್ಲಿ ಒಂದೇ ನೆಮ್ಮದಿ ಕೇಂದ್ರವಿದೆ. ಸಮರ್ಪಕ ಸಿಬ್ಬಂದಿಯೂ ಇಲ್ಲ. ಅಲ್ಲಿ ಕಾಯಂ ಸಿಬ್ಬಂದಿ ನೇಮಕ ಮಾಡದ ಕಾರಣ ಗುತ್ತಿಗೆ ಆಧಾರಿತ ನೌಕರರು ಸರಿಯಾಗಿ ಸೇವೆ ನೀಡುತ್ತಿಲ್ಲ. ಭ್ರಷ್ಟಾಚಾರ ತಾಂಡವಾಡುತ್ತಿದೆ. ದಿನವೂ ಜನರು ಸಾಲುಗಟ್ಟಿ ನಿಲ್ಲುವುದು ಅನಿವಾರ್ಯವಾಗಿದೆ. ಸರಿಯಾದ ನೆರಳು, ನೀರಿನ ವ್ಯವಸ್ಥೆಯೂ ಇಲ್ಲ. ಮಹಿಳೆಯರಿಗೆ ಸೂಕ್ತ ಶೌಚಾಲಯವಿಲ್ಲ. ಜಿಲ್ಲಾಧಿಕಾರಿ ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದೂ ಆಗ್ರಹಿಸಿದರು.
ಮುಖಂಡರಾದ ಮಹಮ್ಮದ್ ಸಿರಾಜುದ್ದೀನ್, ಅಜಮ್ ಪಟೇಲ್, ಶಫಿ ಬಾಬಾ, ಸೈಯದ್ ಸಜ್ಜಾದ ಅಲಿ ಇನಾಮದಾರ, ಶೇಖ್ ಸೈಫನ್, ಆಕಾಶ ಬಲದೇವಸಿಂಗ್ ನೇತೃತ್ವ ವಹಿಸಿದ್ದರು.