ಕಲಬುರಗಿ: ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಗೆ ಆಗ್ರಹಿಸಿ ನಗರದ ಸರ್ದಾರ ವಲ್ಲಭಭಾಯ್ ಪಟೇಲ್ ವೃತ್ತದಲ್ಲಿ ಶನಿವಾರಸಂಯುಕ್ತ ಹೋರಾಟ ಸಂಘಟನೆಯ ಮುಖಂಡರು ಪ್ರತಿಭಟನೆ ನಡೆಸಿದರು.
ಮಾಜಿ ಶಾಸಕ ಬಿ.ಆರ್. ಪಾಟೀಲ ಮಾತನಾಡಿ, ‘ಬಹು ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ಸಾವಿರಾರು ರೈತರು ದೆಹಲಿಯಲ್ಲಿ 13 ತಿಂಗಳು ಪ್ರತಿಭಟನೆ ನಡೆಸಿದರು. ಇದಕ್ಕೆ ಹೆದರಿದ ಕೇಂದ್ರ ಸರ್ಕಾರ 2021ರ ಡಿಸೆಂಬರ್ನಲ್ಲಿ ಆ ಕಾಯ್ದೆಗಳನ್ನು ಹಿಂಪಡೆದು ಬೆಂಬಲ ಬೆಲೆ ನೀಡುವ ಭರವಸೆ ಲಿಖಿತವಾಗಿ ನೀಡಿತ್ತು. ಕೊಟ್ಟ ಮಾತನ್ನು ಈಡೇರಿಸದ ಕೇಂದ್ರ ಸರ್ಕಾರ ರೈತರನ್ನು ವಂಚಿಸುತ್ತಿದೆ’ ಎಂದರು.
‘ಈ ಹೋರಾಟದ ಅವಧಿಯಲ್ಲಿ 700ಕ್ಕೂ ಅಧಿಕ ರೈತರು ಮೃತಪಟ್ಟಿದ್ದಾರೆ. ಮೃತ ರೈತರ ಕುಟುಂಬಸ್ಥರಿಗೆ ಈವರೆಗೂ ಪರಿಹಾರ ಧನ ಪಾವತಿ ಆಗಿಲ್ಲ. ರೈತರ ವಿರುದ್ಧ ದಾಖಲಿಸಿದ್ದ ಪ್ರಕರಣಗಳನ್ನು ಹಿಂಪಡೆದಿಲ್ಲ. ರಾಷ್ಟ್ರದಲ್ಲಿ ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂಪಡೆದರೂ ಕರ್ನಾಟಕದಲ್ಲಿ ಈಗಲೂ ಜಾರಿಯಲ್ಲಿದೆ. ಕೂಡಲೇ ಅದನ್ನು ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.