ಕಲಬುರಗಿ: ಹೊರಗುತ್ತಿಗೆ ನೌಕರರ ಬಾಕಿ ವೇತನ ಪಾವತಿ ಹಾಗೂ ನೌಕರರಿಗೆ ಕಿರುಕುಳ ಕೊಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಜಿಲ್ಲಾ ಸಮಿತಿ ಸದಸ್ಯರು ಸೋಮವಾರದಿಂದ ಅನಿರ್ದಿಷ್ಟ ಅವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.
ಸಮಾಜ ಕಲ್ಯಾಣ ಇಲಾಖೆ ಮುಂಭಾಗ ಧರಣಿ ಕೈಗೊಂಡು, ಇಲಾಖೆಯ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
‘ಇಲಾಖೆಯ ಅಧಿಕಾರಿ ವಿಜಯಕುಮಾರ ಅವರು ಹೊರಗುತ್ತಿಗೆ ನೌಕರರಿಗೆ ಕಿರುಕುಳ ಕೊಡುತ್ತಿದ್ದಾರೆ. ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಕೆಲವರನ್ನು ಕಾರಣ ಇಲ್ಲದೆ ಸೇವೆಯಿಂದ ತೆಗೆದು ಹಾಕಿದ್ದಾರೆ. ಏಜೆನ್ಸಿಗಳೊಂದಿಗೆ ಅವ್ಯವಹಾರದಲ್ಲಿ ಭಾಗಿಯಾಗಿ ಪ್ರತಿ ನೌಕರರಿಗೆ ತಿಂಗಳಿಗೆ ₹1000 ಕಡಿಮೆ ಪಾವತಿಸುತ್ತಿದ್ದಾರೆ. ಇಪಿಎಫ್ ಸಹ ಸರಿಯಾಗಿ ಜಮೆ ಮಾಡುತ್ತಿಲ್ಲ’ ಎಂದು ಧರಣಿನಿರತರು ಆರೋಪಿಸಿದರು.
ಚಿತ್ತಾಪುರ ತಾಲ್ಲೂಕಿನ ಹೆಬ್ಬಾಳ ವಸತಿ ನೌಕರರನ್ನು ಮರು ಆಯ್ಕೆ ಮಾಡಿಕೊಂಡು, ಎಲ್ಲ ನೌಕರರ ಬಾಕಿ ವೇತನ ಪಾವತಿಸಬೇಕು. ಇಪಿಎಫ್ ಹಣವನ್ನು ನೌಕರರ ಖಾತೆಗಳಿಗೆ ಜಮಾ ಮಾಡಬೇಕು. ನಮ್ಮ ಬೇಡಿಕೆ ಈಡೇರುವವರೆಗೂ ಧರಣಿ ನಡೆಸುತ್ತೇವೆ ಎಂದು ಹೇಳಿದರು.
ಸಂಘದ ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಯಂಪಳ್ಳಿ, ಉಪಾಧ್ಯಕ್ಷ ಮೇಘರಾಜ ಕಠಾರೆ, ವಿವಿಧ ತಾಲ್ಲೂಕು ಅಧ್ಯಕ್ಷರಾದ ಭಾಗಣ್ಣ ದೇವನೂರ, ಬಾಬು ಹೊಸಮನಿ, ಪರಶುರಾಮ ಹಡಲಗಿ, ಫಾತೀಮಾ ಬೇಗಂ, ಪ್ರಮುಖರಾದ ಕವಿತಾ ಮಂಜಳಕರ, ರವಿ ಸಿರಸಗಿ ಇದ್ದರು.