ಕಲಬುರ್ಗಿ: ‘ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಮಲ್ಲಾಬಾದ್ ಗ್ರಾಮ ಪಂಚಾಯಿತಿಯ 14 ಮತ್ತು 15ನೇ ಹಣಕಾಸಿನಲ್ಲಿ ಸುಮಾರು ₹ 55 ಲಕ್ಷ ದುರುಪಯೋಗವಾಗಿದ್ದು, ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿ, ಮಲ್ಲಾಬಾದ್ ಗ್ರಾಮ ಪಂಚಾಯಿತಿ ಸದಸ್ಯರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಮುಂದೆ ಸಮಾವೇಶಗೊಂಡ ಸದಸ್ಯರು, ‘ಅಕ್ರಮದ ಬಗ್ಗೆ ತನಿಖೆ ನಡೆಸಬೇಕು ಹಾಗೂ ಪಂಚಾಯಿತಿ ಅಧ್ಯಕ್ಷ ಹಾಗೂ ಪಿಡಿಒ ಅವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದೂ ಆಗ್ರಹಿಸಿದರು.
‘ಸದರಿ ಕ್ರಿಯಾ ಯೋಜನೆ ಕುರಿತು ಸದಸ್ಯರು ಜೊತೆಗೂಡಿ ಅಧ್ಯಕ್ಷ ಹಾಗೂ ಪಿಡಿಒ ಅವರನ್ನು ವಿಚಾರಿಸಿದರೂ ಸರಿಯಾದ ಉತ್ತರ ನೀಡುತ್ತಿಲ್ಲ. ಲೆಕ್ಕವನ್ನೂ ಕೊಡುತ್ತಿಲ್ಲ. ಈಗಾಗಲೇ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದರೂ ಅವರು ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ತನಿಖೆ ಮಾಡಿದರೆ ಮಾತ್ರ ಸತ್ಯ ಹೊರಬೀಳಲಿದೆ’ ಎಂದೂ ಹೇಳಿದರು.
ಸದಸ್ಯರಾದ ಶ್ರೀಶೈಲ ಶಾಮರಾವ್, ಸಿದ್ದು ಜಮಾದಾರ, ಅನಿತಾ ದೊಡ್ಡಮನಿ, ಭಾಗಮ್ಮ ಕೊಳ್ಳಿ, ಶ್ರೀದೇವಿ ಅಡಕಿ,ಕಲ್ಯಾಣಿ ಕುಂಬಾರತೋಟ, ಲಕ್ಷ್ಮಿ ಜಮಾದಾರ, ಭಾಗಮ್ಮ ದೊಡ್ಡಮನಿ, ಲಕ್ಷ್ಮಿಬಾಯಿ ಬಡದಾಳ, ಮಂಜುಳಾ ಮೋರೆ, ಭಾಗ್ಯಶ್ರೀ ಬಗಲಿ ಹಾಗೂ ಡಿ.ಎಸ್.ಎಸ್. ಜಿಲ್ಲಾ ಘಟಕದ ಅಧ್ಯಕ್ಷ ಸಂಗಮನಾಥ ಬಟಗೇರಿ ಇದ್ದರು.