ಕಲಬುರ್ಗಿ: ಶಾಸಕ ಬಸವರಾಜ ಮತ್ತಿಮೂಡ ಅವರಿಗೆ ಹೊಸ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿ, ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹಾಗೂ ಮತ್ತಿಮೂಡ ಅವರ ಅಭಿಮಾನಿಗಳು ನಗರದಲ್ಲಿ ಶುಕ್ರವಾರ ಬೃಹತ್ ಮೆರವಣಿಗೆ ನಡೆಸಿದರು.
ಇಲ್ಲಿನಸರ್ದಾರ್ ವಲ್ಲಭಭಾಯಿ ಪಾಟೀಲ್ ವೃತ್ತದಲ್ಲಿ ಸೇರಿದ ಹಲವು ಯುವಕರು ಹಾಗೂ ಮಹಿಳೆಯರು, ಶರಣಬಸವೇಶ್ವರರ ದೇವಸ್ಥಾನದವರೆಗೆ ಮೆರವಣಿಗೆ ನಡೆಸಿದರು. ಮಾರ್ಗದುದ್ದಕ್ಕೂ ಮತ್ತಿಮೂಡ ಅವರಿಗೆ ಸಚಿವ ಸ್ಥಾನ ನೀಡಲೇಬೇಕು ಎಂದು ಘೋಷಣೆ ಮೊಳಗಿಸಿದರು. ಜಿಲ್ಲಾಧಿಕಾರಿ ಕಚೇರಿಗೆ ಬಂದ ಕಾರ್ಯಕರ್ತರು, ಅಲ್ಲಿ ಕೆಲ ಕಾಲ ಧರಣಿ ನಡೆಸಿ ಘೋಷಣೆ
ಹಾಕಿದರು.
ಜಗತ್ ವೃತ್ತದಲ್ಲಿ ಬಾಬು ಜಗಜೀವನರಾಮ್, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಸವೇಶ್ವರರ ಪ್ರತಿಮೆಗಳಿಗೆ ಮಾಲಾರ್ಪಣೆ
ಮಾಡಿದರು.
ಹಲವು ಕಾರ್ಯಕರ್ತರು ಅಲ್ಲಿಂದ ಶರಣಬಸವೇಶ್ವರ ದೇವಸ್ಥಾನಕ್ಕೆ ಬಂದು ದೀಡ್ ನಮಸ್ಕಾರ ಹಾಕಿದರು. ಶಾಸಕರ ಭಾವಚಿತ್ರ ಹಿಡಿದು ಜೈಕಾರ ಹಾಕಿದರು.ಮುಖಂಡರಾದ ಪ್ರಶಾಂತ ವಾಗ್ಮೊರೆ, ಸತೀಶ ಲಾಡ್ ಮುಗುಲಿ, ಹರ್ಷಾನಂದ, ರಾಜು ವಾಲಿ, ಸಂಗಮೇಶ ವಾಲಿ ಸೇರಿದಂತೆ ಹಲವರು ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.