ಕಲಬುರ್ಗಿ: ಉತ್ತರ ಪ್ರದೇಶದ ಹಾಥರಸ್ನಲ್ಲಿ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ, ನಾಲಿಗೆ ಕತ್ತರಿಸಿ ಕೊಲೆ ಮಾಡಿದ ಘಟನೆಗೆ ಜಿಲ್ಲೆಯಲ್ಲಿ ಆಕ್ರೋಶ ಭುಗಿಲೆದ್ದಿದ್ದು, ರಾಜಕೀಯ ಪಕ್ಷಗಳು, ಮಹಿಳಾ ಸಂಘಟನೆಗಳು ಹಾಗೂ ಯುವಜನ ಸಂಘಟನೆಗಳು ಗುರುವಾರ ವಿವಿಧೆಡೆ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು.
ಎಸ್ಯುಸಿಐ ಕಮ್ಯುನಿಸ್ಟ್: ಪಕ್ಷದ ಕಾರ್ಯಕರ್ತರು ಜಿಲ್ಲಾ ಕಾರ್ಯದರ್ಶಿ ಎಚ್.ವಿ.ದಿವಾಕರ ಅವರ ನೇತೃತ್ವದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ದಲಿತ ವಿದ್ಯಾರ್ಥಿನಿಯ ಮೇಲೆ ಗುಂಪು ಅತ್ಯಾಚಾರಗೈದ ನಾಲ್ವರು ಮೇಲ್ಜಾತಿಯ ಠಾಕೂರ್ ಪಂಗಡಕ್ಕೆ ಸೇರಿದ ಯುವಕರು ಯುವತಿಯ ನಾಲಿಗೆ ಕತ್ತರಿಸಿ, ಬೆನ್ನು ಮೂಳೆ ಮುರಿದು ಕ್ರೌರ್ಯ ಮೆರೆದಿದ್ದರೆ. ಸೆ.14 ರಂದು ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಜೀವನ್ಮರಣದ ಹೋರಾಟ ನಡೆಸಿ ಸೆ 29ರಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ದುಷ್ಕೃತ್ಯ ನಡೆದ ದಿನವೇ ಆಕೆಯ ಪೋಷಕರು ಪೊಲೀಸರ ಗಮನಕ್ಕೆ ತಂದರೂ ಪ್ರಕರಣ ದಾಖಲಿಸಿಕೊಳ್ಳಲು ವಿಳಂಬ ಮಾಡಿ ಆರೋಪಿಗಳನ್ನು ರಕ್ಷಿಸುವ ಕೆಲಸವನ್ನು ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಮಾಡಿದೆ ಎಂದು ಪ್ರತಿಭಟನಾಕಾರರು ಟೀಕಿಸಿದರು.
ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರಾದ ವಿ.ಜಿ. ದೇಸಾಯಿ, ಮಹೇಶ್ ಎಸ್.ಬಿ., ಎಸ್.ಎಂ.ಶರ್ಮಾ, ಮಹೇಶ ನಾಡಗೌಡ, ಹಣಮಂತ ಎಸ್. ಎಚ್., ಗೌರಮ್ಮ ಸಿ.ಕೆ. ಮುಖಂಡರಾದ ಸ್ನೇಹಾ ಕಟ್ಟಿಮನಿ, ಭೀಮಾಶಂಕರ್ ಪಾಣೆಗಾಂವ್, ಅಶ್ವಿನಿ ಎ, ಮಲ್ಲಿನಾಥ್ ಸಿಂಗೆ ಭಾಗವಹಿಸಿದ್ದರು.
ಯುವ ಕಾಂಗ್ರೆಸ್: ಅತ್ಯಾಚಾರ ಘಟನೆಯನ್ನು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಮುಖ್ಯರಸ್ತೆಯನ್ನು ತಡೆದು ಪ್ರತಿಭಟನೆ ನಡೆಸಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಬಳೆಗಳನ್ನು ಕಳುಹಿಸಿಕೊಡುವ ಮೂಲಕ ನಿಮ್ಮ ಕೈಯಿಂದ ಆಗದೆ ಹೋದರೆ ರಾಜೀನಾಮೆ ನೀಡಿ ಎಂದು ವ್ಯಂಗ್ಯವಾಡಿದರು. ಪ್ರತಿಭಟನೆಯಲ್ಲಿ ಅಧ್ಯಕ್ಷ ಈರಣ್ಣ ಝಳಕಿ, ಶರಣಗೌಡ ಪಾಟೀಲ, ಶಿವಾನಂದ ಹೊನಗುಂಟಿ, ಅರುಣ ಮಡ್ಡಿ, ರಹಿಂ ಖಾನ್ ಪಟ್ಟಣ, ಧರ್ಮರಾಜ ಹೇರೂರ, ಮಲ್ಲಿಕಾರ್ಜುನ ಹಲಕರ್ಟಿ, ಶಿವಲಿಂಗ ಸುಂಕದ ಭಾಗವಹಿಸಿದ್ದರು.
ಜನವಾದಿ ಮಹಿಳಾ ಸಂಘಟನೆ: ಜನವಾದಿ ಮಹಿಳಾ ಸಂಘಟನೆ ಮತ್ತು ಪ್ರಗತಿಪರ ಸಂಘಟನೆಗಳಿಂದ ನಡೆದ ಪ್ರತಿಭಟನೆಯಲ್ಲಿ ಅರ್ಜುನ ಭದ್ರೆ, ಅಶ್ವಿನಿ ಮದನಕರ, ದಿನೇಶ ದೊಡ್ಮನಿ, ಪೂಜಾ ಸಿಂಗೆ, ರೇಣುಕಾ ಸಿಂಗೆ, ದಿಲೀಪ್ ಕಾಯಂಕರ್, ಉತ್ತಮ ಕಡಗಂಚಿ, ಭವಾನಿ ಪ್ರಸಾದ, ಸಂತೋಷ ಪಾಳಾ, ಲವಿತ್ರ, ನಾಗೇಂದ್ರ ಜವಳಿ, ಚಂದಮ್ಮ, ಜಗದೇವಿ, ಹುಸೇನಿ, ಪ್ರದೀಪ್ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.