ಕಲಬುರ್ಗಿ: ಜಿಲ್ಲೆಯಲ್ಲಿ ಗುರುವಾರ ರಾತ್ರಿ ಆರಂಭಗೊಂಡ ಮಳೆ ಶುಕ್ರವಾರ ಬೆಳಿಗ್ಗೆಯವರೆಗೂ ಸುರಿಯಿತು. ಈ ಅವಧಿಯಲ್ಲಿ ವಿದ್ಯುತ್ ಸಹ ಕೈಕೊಟ್ಟಿತ್ತು.
ಕಲಬುರ್ಗಿ ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಅಲ್ಲಿಯ ಮನೆಗಳವರು ಪರದಾಡಿದರು. ಕೆಲ ರಸ್ತೆಗಳಲ್ಲಿ ನೀರು ತುಂಬಿ ಹರಿದಿದ್ದರಿಂದ ಬೆಳಿಗ್ಗೆ ಶಾಲೆಗಳಿಗೆ ಹೋಗುವ ಮಕ್ಕಳಿಗೆ ತೊಂದರೆಯಾಯಿತು.
ನಗರ ಹೊರವಲಯದ ತಾಜ್ ಸುಲ್ತಾನಪುರ ಬಳಿಯ ರೈಲ್ವೆ ಕೆಳ ಸೇತುವೆ ಶುಕ್ರವಾರ ಮಧ್ಯಾಹ್ನದವರೆಗೂ ಸಂಪೂರ್ಣ ಜಲಾವೃತವಾಗಿತ್ತು. ಕೆರೆ ಭೋಸಗಾ, ಪಟ್ಟಣ ಕಡೆಯಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಅಲ್ಲಿಗೆ ಹರಿದು ಬಂತು.
ಚಿಂಚೋಳಿ ತಾಲ್ಲೂಕು ತುಮಕುಂಟಾ ಗ್ರಾಮದ ರಂಗಾರಡ್ಡಿ ಪಿತಾಂಬರಿ ಅವರ ಹೊಲದಲ್ಲಿ ಬೆಳೆದಿದ್ದ ಜೋಳ ಸಂಪೂರ್ಣ ನೆಲಕ್ಕುರುಳಿದೆ. ಸುತ್ತಲಿನ ಪ್ರದೇಶದ ಬೆಳೆಯೂ ಹಾನಿಯಾಗಿದೆ.
ಬರದಿಂದ ತತ್ತರಿಸಿದ್ದ ಜನರಿಗೆ ಈ ಮಳೆ ಸ್ವಲ್ಪ ನೆಮ್ಮದಿ ತಂದಿದೆ. ಜಾನುವಾರುಗಳಿಗೆ ಮೇವು–ನೀರಿನ ಸಮಸ್ಯೆ ಅಲ್ಪಮಟ್ಟಿಗಾದರೂ ನೀಗಲಿದೆ ಎಂದು ಜನ ಹೇಳುತ್ತಿದ್ದಾರೆ. ಆದರೆ, ತೊಗರಿ, ಕಡಲೆ ಬೆಳೆಗೆ ಸಂಕಷ್ಟ ಎದುರಾಗಿದೆ.