ಚಿಂಚೋಳಿ (ಕಲಬುರಗಿ): ತಾಲ್ಲೂಕಿನ ದೇಗಲಮಡಿ ಗ್ರಾಮದ ಕೂಡು ರಸ್ತೆಗೆ ನಿರ್ಮಿಸಿದ ಸೇತುವೆ ಮಳೆಯಿಂದಾಗಿ ಮುಳುಗಿದೆ.
ಗ್ರಾಮದ ಬಳಿಯ ತೊರೆ ತುಂಬಿ ಹರಿಯುತ್ತಿರುವುದರಿಂದ ದೇಗಲಮಡಿ ಹಳೆ ಗ್ರಾಮ ಮತ್ತು ಸಿದ್ದೇಶ್ವರ ನಗರದ ಮಧ್ಯೆ ಸಂಪರ್ಕ ಕಡಿತವಾಗಿದೆ ಎಂದು ಗ್ರಾಮದ ಅವಿನಾಶ ಗೋಸುಲ್ ತಿಳಿಸಿದ್ದಾರೆ.
ತಾಲ್ಲೂಕಿನ ದೇಗಲಮಡಿ, ಯಂಪಳ್ಳಿ, ಮರಪಳ್ಳಿ ಮೊದಲಾದ ಕಡೆ ಪ್ರವಾಹದ ನೀರು ನೀರಿನಲ್ಲಿ ಬೆಳೆಗಳು ಮುಳುಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ ಎಂದು ರೈತ ಮಲ್ಲಿಕಾರ್ಜುನ ಪರೀಟ್ ತಿಳಿಸಿದರು.
ಮುಲ್ಲಾಮಾರಿ ನದಿಯಲ್ಲೂ ಪ್ರವಾಹ ಕಂಡು ಬಂದಿದ್ದು ಕನಕಪುರ ಗ್ರಾಮದ ಬಳಿ ಬ್ರಿಜ್ ಕಂ ಬ್ಯಾರೇಜು ತುಂಬಿ ಹರಿಯುತ್ತಿದೆ. ಕನಕಪುರ, ಗಾರಂಪಳ್ಳಿ, ಗೌಡನಹಳ್ಳಿ, ಚಂದಾಪುರ ಮೊದಲಾದ ಕಡೆ ಮುಲ್ಲಾಮಾರಿಯಲ್ಲಿ ಭಾರಿಪ್ರವಾಹ ಸೃಷ್ಟಿಯಾಗಿದೆ. ತಾಲ್ಲೂಕಿನಲ್ಲಿ ರಾತ್ರಿ ಮಳೆಯಾಗಿದೆ. ನಾಗರಾಳ ಜಲಾಶಯದಿಂದಲೂ ನೀರು ಬಿಡುಗಡೆ ಮಾಡಲಾಗಿದೆ. ಇದರಿಂದ ಮುಲ್ಲಾಮಾರಿ ಹಾಗೂ ಇತರ ತೊರೆಗಳಲ್ಲಿ ಪ್ರವಾಹ ಉಂಟಾಗಿದೆ ಎಂದು ಕನಕಪುರದ ಶ್ರೀಧರ ವಗ್ಗಿ ಮಾಹಿತಿ ನೀಡಿದರು.
ಚಿಂಚೋಳಿ ಪಟ್ಟಣದಲ್ಲಿ 16.6 ಮಿ.ಮೀ, ಕುಂಚಾವರಂ 75.2, ಐನಾಪುರ 05.5, ಸುಲೇಪೇಟ 13.8, ಚಿಮನಚೋಡ 48.2, ಕೋಡ್ಲಿ 20 ಮತ್ತು ನೀಡಗುಂದಾ 16 ಮಿ.ಮೀ.ನಷ್ಟು ಮಳೆ ಸುರಿದೆ. ಜಿಲ್ಲೆಯ ಹಲವೆಡೆ ಬೆಳಿಗ್ಗೆಯಿಂದ ಮಳೆಯಾಗುತ್ತಿದೆ.