ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರಿ ಕಚೇರಿಗಳು, ಅಧಿಕಾರಿಗಳ ಬಂಗಲೆಗಳಲ್ಲಿ ಕಡ್ಡಾಯವಾಗಿ ಮಳೆ ನೀರು ಸಂಗ್ರಹಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಆ ನೀರನ್ನು ಕುಡಿಯಲೂ ಬಳಸಬಹುದಾಗಿದೆ. ಇಲ್ಲವೇ ಒಂದೆಡೆ ಸಂಗ್ರಹಿಸಿ ಸಾರ್ವಜನಿಕ ಉದ್ಯಾನಗಳಿಗೆ ಬಳಕೆ ಮಾಡಬಹುದು. ನಗರದಲ್ಲಿ 300 ಮಸೀದಿಗಳಿದ್ದು, ನಮಾಜ್ ಮಾಡುವ ಸಂದರ್ಭದಲ್ಲಿ ಕೈಕಾಲು ತೊಳೆದುಕೊಂಡ ಬಳಿಕ ವ್ಯರ್ಥವಾಗಿ ಹರಿಯುವ ನೀರನ್ನು ಸಂಗ್ರಹಿಸಲು ಮಸೀದಿಗಳ ಮುಖ್ಯಸ್ಥರ ಮನವೊಲಿಸಲಾಗುವುದು. ಪ್ರತಿಯೊಂದು ಮಸೀದಿಯಲ್ಲಿ ಕನಿಷ್ಠ 1ರಿಂದ 3 ಸಾವಿರ ಲೀಟರ್ ನೀರು ಬಳಕೆಯಾಗುತ್ತದೆ. ಈ ನೀರನ್ನೂ ಉದ್ಯಾನಗಳ ನಿರ್ವಹಣೆಗೆ ಬಳಸಬಹುದು. ತಾರಸಿ ನೀರನ್ನು ಸಂಗ್ರಹಿಸಲು ಎಲ್ಲರೂ ಮುಂದಾದರೆ ಜಲಮಂಡಳಿ ಪೂರೈಸುವ ನೀರಿನ ಬದಲು ಮಳೆ ನೀರು ಬಳಸುವ ಮೂಲಕ ಸ್ವಾವಲಂಬನೆ ಸಾಧಿಸಬಹುದಾಗಿದೆ’ ಎಂದರು.