ಕಲಬುರಗಿ: ‘ಕನ್ನಡ ಜೀವದ ಭಾಷೆಯಾಗಿದೆ’ ಎಂದು ನಿವೃತ್ತ ಪ್ರಾಚಾರ್ಯ ವೈಜನಾಥ ಪಾಟೀಲ ಅಭಿಪ್ರಾಯಪಟ್ಟರು.
ನಗರದ ಶರಣಬಸವೇಶ್ವರ ವಸತಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಎನ್ನುವ ಪದದಲ್ಲಿಯೇ ಶಕ್ತಿ ಇದೆ. ಇಂಥ ನಾಡಿನಲ್ಲಿ ಹುಟ್ಟಿರುವುದು ನಮ್ಮೆಲ್ಲರ ಅದೃಷ್ಟ. ನಾವೆಲ್ಲರೂ ಕನ್ನಡದಲ್ಲಿ ಮಾತನಾಡೋಣ. ಕನ್ನಡದಲ್ಲೇ ವ್ಯವಹರಿಸೋಣ. ನಮ್ಮ ಭಾವನೆಗಳನ್ನು ಕನ್ನಡದಲ್ಲೇ ವ್ಯಕ್ತಪಡಿಸೋಣ ಎಂದರು.
ಇಲ್ಲಿನ ಸಾಹಿತ್ಯ-ಸಂಸ್ಕೃತಿ, ಆಚಾರ-ವಿಚಾರ, ಸಂಸ್ಕಾರ-ಸಂಪ್ರದಾಯಗಳನ್ನು ಗೌರವಿಸುವ ಕೆಲಸ ಮಾಡೋಣ ಎಂದು ಹೇಳಿದರು.
ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವಿದ್ಯಾರ್ಥಿಗಳು ಭಾಷಣ, ಗಾಯನ ಹಾಗೂ ಕವನ ವಾಚನ ಮಾಡಿದರು. ಅಪ್ಪ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಶಂಕರಗೌಡ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಪ್ರಿಯಾಂಕಾ ಪಾಟೀಲ ನಿರೂಪಿಸಿದರು. ನವಮಿ ಸ್ವಾಗತಿಸಿದರು. ಭಾವನಾ ಪರಿಚಯಿಸಿದರು. ಓಂಕಾರ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.