ಕಲಬುರಗಿ: ‘ಕೊರೊನಾ ವೈರಾಣು ಹರಡದಂತೆ ಬೀದಿಬದಿ ವ್ಯಾಪಾರಿಗಳು ಕೂಡ ಎಲ್ಲ ಎಚ್ಚರಿಕೆ ಕ್ರಮಗಳನ್ನು ವಹಿಸಬೇಕು. ಅದಕ್ಕೆ ತಕ್ಕಂತೆ ಸರ್ಕಾರವೂ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಬೇಕು’ ಎಂದು ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಿಲ್ಲಾ ಘಟಕದ ಜಗನ್ನಾಥ ಎಸ್. ಸೂರ್ಯವಂಶಿ ಹೇಳಿದರು.
ನಗರದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಬೀದಿಬದಿ ವ್ಯಾಪಾರಿಗಳ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಅಸಂಘಟಿತ ವಲಯದ ವ್ಯಾಪಾರಿಗಳನ್ನು ಸಂಘಟಿಸುವ ನಿಟ್ಟಿನಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ. ಇದರಿಂದ ಬೀದಿ ವ್ಯಾಪಾರಿಗಳಿಗೆ ಆನೆಬಲ ಬಂದಂತಾಗಿದ್ದು, ಸಾಕಷ್ಟು ಕಿರುಕುಳ ನಿಂತಿದೆ’ ಎಂದರು.
‘ಈಗಾಗಲೇ ರಾಜ್ಯದಾದ್ಯಂತ ಬೀದಿಬದಿ ವ್ಯಾಪಾರಿಗಳು ಎದುರಿಸುತ್ತೀರುವ ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತು ಒಕ್ಕೂಟದ ಅಧ್ಯಕ್ಷ ರಂಗಸ್ವಾಮಿ ಅವರು ಸರ್ಕಾರಕ್ಕೆ ಮನವರಿಕೆ ಮಾಡಿದ್ದಾರೆ. ರಾಷ್ಟ್ರೀಯ ಬೀದಿಬದಿ ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷರಾದ ಅರಬಿಂದಸಿಂಗ್ ಅವರೂ ವಿಡಿಯೊ ಸಂವಾದದ ಮೂಲಕ ಸಾಕಷ್ಟು ಚರ್ಚೆ ನಡೆಸಿದ್ದಾರೆ. ಸಂಘಟನೆ ಬಲಪಡಿಸುವ ಕುರಿತು ಸಲಹೆ ಕೂಡ ನೀಡಿದ್ದಾರೆ. ಪೊಲೀಸರಿಂದ ವ್ಯಾಪಾರಕ್ಕೆ ಆಗುವ ತೊಂದರೆಗಳು ಕುರಿತು ಕೂಡ ಅವರು ಚರ್ಚಿಸಿದ್ದಾರೆ. ನಮ್ಮ ಸಮಸ್ಯೆಗಳ ನಿವಾರಣೆಗೆ ಸಂಘಟನಾತ್ಮಕ ಪ್ರಯತ್ನ ಬಹಳ ಮುಖ್ಯ’ ಎಂದರು.
ಒಕ್ಕೂಟದ ಮುಖಂಡರಾದ ಡಾ.ವೇದಮೂರ್ತಿ, ಶಿವಪ್ಪ ಬಾಗೋಡಿ, ಹುಸೇನ, ಶಿವು ಮಡಕಿ, ರಾಘವೇಂದ್ರ ಕಾಮದಾಸಿ, ಗಾಯತ್ರಿ, ಲಕ್ಷ್ಮೀ ಬಾಬಜಿ, ರುಕ್ಕಿಣಿ, ದತ್ತು ಭಾಸಗಿ, ಬಾಬು ಶೇಖ ಪರಿಟ್ ಇದ್ದರು.