ಚಿತ್ತಾಪುರ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಕಾಟಮ್ಮದೇವರಹಳ್ಳಿ ಹತ್ತಿರ ಕಾಗಿಣಾ ನದಿಯಲ್ಲಿ ಅಕ್ರಮ ಮರಳು ದಂಧೆ, ಅನಧಿಕೃತ ದಾಸ್ತಾನು, ಸಾಗಾಟ ನಡೆಯುತ್ತಿದೆ ಎಂಬ ಮಾಹಿತಿ ಆಧರಿಸಿ ಶಾಸಕ ಪ್ರಿಯಾಂಕ್ ಖರ್ಗೆ ಅವರು ಬುಧವಾರ ದಾಳಿ ಮಾಡಿ ದಂಧೆಕೋರರಿಗೆ ಹಾಗೂ ತಾಲ್ಲೂಕು ಆಡಳಿತಕ್ಕೆ ಬಿಸಿ ಮುಟ್ಟಿಸಿದರು.
ಮರಳು ದಂಧೆ ಕುರಿತು ಅರಿಯಲು ಖುದ್ದಾಗಿ ಕಾಟಮ್ಮದೇವರಹಳ್ಳಿ ಗ್ರಾಮ ಮತ್ತು ಹತ್ತಿರದ ಕಾಗಿಣಾ ನದಿಯ ಪರಿಸರದಲ್ಲಿ ಮರಳು ಸಾಗಾಟ ಬಗ್ಗೆ ಅವಲೋಕಿಸಿದರು. ಗ್ರಾಮದೊಳಗೆ ರಾಜಾರೋಷವಾಗಿ ಮರಳು ದಾಸ್ತಾನು ಮಾಡಿರುವ ದೃಶ್ಯ ಕಂಡು ಮಾಡಬೂಳ ಪೊಲೀಸರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
‘ಮರಳು ಸಾಗಾಟ ಮಾಡುವ ಟ್ರ್ಯಾಕ್ಟರ್, ಟಿಪ್ಪರ್ ಕುರಿತು ತನಿಖೆ ನಡೆಸಬೇಕು. ಮರಳು ದಾಸ್ತಾನು ಜಪ್ತಿ ಮಾಡಿಕೊಳ್ಳಬೇಕು. ಗಣಿ ಮತ್ತು ಭೂವಿಜ್ಞಾನ ಇಲಾಖೆ ಮೂಲಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು’ ಎಂದು ಸ್ಥಳದಲ್ಲಿದ್ದ ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರಿಗೆ ಸೂಚಿಸಿದರು.
‘11 ಟಿಪ್ಪರ್ ಲೋಡ್ ಮರಳು ಜಪ್ತಿ ಮಾಡಿಕೊಳ್ಳಲಾಗಿದೆ. ಮರಳು ಸಾಗಾಟ ಮಾಡಲು ಬಳಸುತ್ತಿದ್ದ ನಾಲ್ಕು ಟ್ಯ್ರಾಕ್ಟರ್ ವಶಕ್ಕೆ ಪಡೆಯಲಾಗಿದೆ. ಪ್ರಕರಣ ದಾಖಲಿಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ತಹಶೀಲ್ದಾರ್ ಉಮಾಕಾಂತ ತಿಳಿಸಿದ್ದಾರೆ.